ಕಪ್ಪೆ ಮಾಂಸದಾಸದಿಂದ ಅಪಾಯಕ್ಕೆ ಸಿಲುಕಿದೆ ಮಂಡೂಕ ಸಂತತಿ!
ಗೋವಾದಲ್ಲಿ ಹೆಚ್ಚಿದ ಕಪ್ಪೆಗಳ ಮಾಂಸದ ಬೇಡಿಕೆ. ಹಾಗಾಗಿ, ಕರ್ನಾಟಕದ ಕರಾವಳಿಯಲ್ಲಿ ಆರಂಭವಾಗಿದೆ ಕಪ್ಪೆಗಳ ಬೇಟೆ. ಗೋವಾದಲ್ಲಿ ಕಪ್ಪೆ ಬೇಟೆ ನಿಷೇಧ ಹಿನ್ನೆಲೆಯಲ್ಲಿ ಕರ್ನಾಟಕದ ಕಪ್ಪೆಗಳಿಗೆ ಕಂಟಕ.
ಹುಬ್ಬಳ್ಳಿ, ಜುಲೈ 15: ಮಳೆಗಾಲದ ಅತಿಥಿ ಕಪ್ಪೆಗೆ ಕರಾವಳಿಯಲ್ಲಿ ಭಾರಿ ಡಿಮಾಂಡ್ ಬಂದಿದೆ. ನೆರೆಯ ಗೋವಾದಲ್ಲಿ ಕಪ್ಪೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ಗೋವಾದಲ್ಲಿ ಕಪ್ಪೆಗಳನ್ನು ಹಿಡಿಯದಂತೆ ಕಠಿಣ ಕಾನೂನು ಕ್ರಮ ಜಾರಿಯಲ್ಲಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದ್ದು, ಕರ್ನಾಟಕದ ಗಡಿ ಭಾಗದಲ್ಲಿರುವ ಕಾರವಾರದಿಂದ ಭಟ್ಕಳದವರೆಗಿನ ಪ್ರಾಂತ್ಯಗಳಲ್ಲಿ, ಕಪ್ಪೆಗಳನ್ನು ಹಿಡಿದು ಸಾಗಿಸುವ ವ್ಯವಸ್ಥಿತ ಜಾಲಗಳ ಅಕ್ರಮವಾಗಿ ಕಾರ್ಯನಿರ್ವಸಲು ಆರಂಭಿಸಿವೆ.
ಇದು ಪ್ರಕೃತಿ ಪ್ರಿಯರಲ್ಲಿ ಆತಂಕ ಉಂಟುಮಾಡಿದೆ. ಈ ಮಧ್ಯೆ ರಾಜ್ಯದಿಂದ ಅಕ್ರಮವಾಗಿ ಕಪ್ಪೆ ಸಾಗಿಸುವಾಗ ಹಲವರನ್ನು ಪೊಲೀಸರು ವಶಕ್ಕೆ ಪಡೆದಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.
ದರ ಹೆಚ್ಚು: ಕಳೆದ ವರ್ಷ ಗೋವಾದಲ್ಲಿ ಪ್ರತಿ ಕಪ್ಪೆಯ ದರ 70 ರೂಪಾಯಿ ಇತ್ತು. ಆದರೆ ಕಪ್ಪೆ ಮಾಂಸಕ್ಕೆ ಆ ರಾಜ್ಯದಲ್ಲಿ ನಿರ್ಭಂದ ಹೇರಿದ್ದರಿಂದ ಇದರ ದರ 200 ರೂಪಾಯಿ ವರೆಗೂ ಹೆಚ್ಚಳವಾಗಿದೆ.
ಇತ್ತ ರಾಜ್ಯದಿಂದ ಅಕ್ರಮವಾಗಿ ಸಾಗಿಸುವ ಕಪ್ಪೆಗಳಿಗೂ ಬೇಡಿಕೆ ಹೆಚ್ಚಾಗಿದ್ದು, ಕಾರವಾರದಿಂದ ಭಟ್ಕಳದ ವರೆಗೂ ಕಪ್ಪೆಗಳನ್ನು ಹಿಡಿದು ಅಕ್ರಮವಾಗಿ ಸಾಗಿಸುವ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಅರಣ್ಯ ಇಲಾಖೆಯ ಕಟ್ಟೆಚ್ಚರದ ಮಧ್ಯೆಯೂ ಇಲಾಖೆ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ.
ಸಂತತಿ ಕ್ಷೀಣ ಭಯ: ಈ ಮಧ್ಯೆ ಮಾಂಸಕ್ಕಾಗಿ ಕಪ್ಪೆಗಳನ್ನು ಸಾಯಿಸುತ್ತಿರುವುದರಿಂದ ಅವುಗಳ ಸಂತತಿ ಕ್ಷೀಣಿಸುವ ಭಯ ಆರಂಭವಾಗಿದೆ. ಕಪ್ಪೆಗಳ ನಿರಂತರ ಮಾರಣ ಹೋಮದಿಂದಾಗಿ ಅವುಗಳ ಸಂಖ್ಯೆ ಕಡಿಮೆಯಾದರೆ ಪರಿಸರದ ಜೀವ ವೈವಿಧ್ಯತೆಗೆ ಧಕ್ಕೆಯುಂಟಾಗುವ ಆತಂಕ ಎದುರಾಗಿದೆ. ಇವುಗಳನ್ನು ಆಹಾರವನ್ನಾಗಿ ಬಳಸುವ ಇತರೆ ಜೀವಿಗಳು ಆಹಾರಕ್ಕಾಗಿ ಪರದಾಡುವ ಆತಂಕ ಎದುರಾಗಿದ್ದು, ಕಾನೂನಿಗೆ ವಿರುದ್ಧವಾಗಿ ಕಪ್ಪೆಗಳನ್ನು ಮಾಂಸಕ್ಕಾಗಿ ಬಳಕೆ ಮಾಡುವುದನ್ನು ತಡೆಯಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಇದಲ್ಲದೆ ಪರಿಸರದಲ್ಲಿ ಕಪ್ಪೆಗಳು ಕ್ರಿಮಿ ಕೀಟಗಳನ್ನು ತಿನ್ನುವುದರಿಂದ ಸೊಳ್ಳೆ ಸೇರಿದಂತೆ ಮನುಷ್ಯನಿಗೆ ತೊಂದರೆ ಕೊಡುವ ಇತರೆ ಸೂಕ್ಷ್ಮ ಜೀವಿಗಳನ್ನು ನಾಶ ಮಾಡುತ್ತವೆ. ಅಲ್ಲದೆ ಜಮೀನಿನಲ್ಲಿ ಬೆಳೆಗಳಿಗೆ ತಗುಲುವ ಕೀಟಗಳ ಹತೋಟಯಲ್ಲೂ ಇವುಗಳ ಪಾತ್ರ ದೊಡ್ಡದು. ಹೀಗಿರುವಾಗ ಇವುಗಳ ನಾಶದಿಂದ ಪರಿಸರದ ಜೀವ ವೈವಿಧ್ಯತೆ ಏರುಪೇರಾಗುವ ಆತಂಕ ಎದುರಾಗಿದೆ.