'ಮಂಗಳೂರಿನಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ, ಸಂಶಯದ ಮೇಲೆ ಪರೀಕ್ಷೆ'
ಮಂಗಳೂರು, ಮೇ 22: ಕೇರಳದ ಕೋಯಿಕ್ಕೋಡ್ ನಲ್ಲಿ 10 ಜನರನ್ನು ಬಲಿ ಪಡೆದ ಮಾರಣಾಂತಿಕ ನಿಪಾ ವೈರಸ್ ರಾಜ್ಯಕ್ಕೂ ಕಾಲಿಟ್ಟಿರುವ ಆತಂಕ ಎದುರಾಗಿದೆ. ಕೇರಳಕ್ಕೆ ಸಮೀಪದಲ್ಲಿರುವ ಕರಾವಳಿಯ ನಗರ ಮಂಗಳೂರಿನಲ್ಲಿ ರೋಗಿಗಳಿಬ್ಬರಿಗೆ ನಿಪಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ನಿಪಾ ಸೋಂಕು ಪತ್ತೆಯಾಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ವಿಪರೀತ ಜ್ವರ: ನಿಪಾಹ್ ವೈರಸ್ಗೆ ಕೇರಳದಲ್ಲಿ 9 ಮಂದಿ ಬಲಿ
ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, "ರೋಗಿಗಳ ರಕ್ತದ ಮಾದರಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸದ್ಯಕ್ಕೆ ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ ," ಎಂದು ಮಾಹಿತಿ ನೀಡಿದ್ದಾರೆ.
'ರೋಗಿಗಳಿಗೆ ನಿಪಾ ವೈರಸ್ ತಗುಲಿರುವ ಬಗ್ಗೆ ಖಚಿತವಾಗಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಂಕಿತ ನಿಪಾ ವೈರಸ್ ಪತ್ತೆಯಾದ ವ್ಯಕ್ತಿಗಳಲ್ಲಿ ಒಬ್ಬರು ಕೇರಳ ಮೂಲದವರಾಗಿದ್ದು, ಇನ್ನೊಬ್ಬರು ಕರ್ನಾಟಕದವರೇ ಆಗಿದ್ದಾರೆ.
ಎಬೊಲಾ ವೈರಸ್ ಬಳಿಕ ಈಗ ದೇಶದಲ್ಲೆಲ್ಲಾ ನಿಪಾ ವೈರಸ್ ಬಗ್ಗೆ ಆತಂಕ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮಾರಣಾಂತಿಕ ನಿಫಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲಾಗುತ್ತಿದೆ.
ನಿಪಾಹ್ ವೈರಸ್ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್
ಕೇರಳ ಗಡಿ ಭಾಗವಾಗಿರುವ ಕಾರಣ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರದಿಂದ ಬಾವಲಿ ತಿಂದು ಬಿದ್ದ ಯಾವುದೇ ಹಣ್ಣು ಹಂಪಲು ಸೇವಿಸದಂತೆ ಎಚ್ಚರಿಕೆ ನೀಡಲಾಗಿದೆ. ಮರದ ಕೆಳಗೆ ಇರುವ ಬಾವಿಗಳನ್ನು ಮುಚ್ಚಿಡುವಂತೆ ಸೂಚನೆ ನೀಲಾಗುತ್ತಿದೆ.
ಹಂದಿ ಸಾಕುವವರು ಪ್ರಾಣಿಗಳಿಗೆ ಸೋಂಕಿನ ಲಕ್ಷಣ ಕಂಡಲ್ಲಿ ಕೂಡಲೇ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ. ಇನ್ನು ಹೊರ ರಾಜ್ಯದಿಂದ ಈ ವೈರಸ್ ತಗುಲಿದ ರೋಗಿ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಬಂದರೆ ತಕ್ಷಣ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಹಾಗು ರೋಗಿಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.