ಮೋದಿ ರೈತರ ಬದಲು ಉದ್ಯಮಿಗಳ ಸಾಲಮನ್ನಾ ಮಾಡ್ತಾರೆ: ಪರಂ ಟೀಕೆ
ಮಂಗಳೂರು, ಆಗಸ್ಟ್ 10: ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಶಾಶ್ವತ ಪರಿಹಾರ ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ವಿಚಾರ ಆಸಕ್ತಿ ಇಲ್ಲ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕಿಡಿಕಾರಿದರು.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ 2017-18 ರಲ್ಲಿ 12,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರಿಂದ ರಾಷ್ಟ್ರೀಯ ಬ್ಯಾಂಕ್ನಲ್ಲಿರುವ 30 ಸಾವಿರ ಕೋಟಿ ರೂ. ಸರ್ಕಾರಕ್ಕೆ ಹೊರೆ ಬಿದ್ದಿದೆ. ಆ ಹೊರೆ ತಪ್ಪಿಸಿದರೆ ಅದೇ ಹಣದಲ್ಲಿ ರೈತರಿಗೆ ಬೇಕಾದ ಹನಿ ನೀರಾವರಿ, ಕೋಲ್ಡ್ ಸ್ಟೋರೇಜ್ ಮೊದಲಾದ ಸಲಕರಣೆ ನೀಡಲು ಸಾಧ್ಯವಿದೆ. ಆದರೆ ಕೇಂದ್ರಕ್ಕೆ ಇದು ಬೇಕಾಗಿಲ್ಲ ಎಂದರು.
ಸಹಕಾರಿ ಬ್ಯಾಂಕ್ ಸಾಲ ಮನ್ನಾ: ಷರತ್ತುಗಳು ಅಷ್ಟು ಸಲೀಸಲ್ಲ!
ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶಿಗರು ಸೇರಿದಂತೆ ಅನಧಿಕೃತವಾಗಿ ಬಂದ ವಿದೇಶಿಗರನ್ನು ಹೊರ ಕಳುಹಿಸಲಾಗುವುದು. ನಾವೇ ಅವರಿಗೆ ವಿಮಾನ ಟಿಕೆಟ್ ನೀಡಿ ಅವರ ದೇಶಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ ಸ್ಥಳೀಯವಾಗಿ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡುವುದು ಅವರವರಿಗೆ ಬಿಟ್ಟದ್ದು ಎಂದರು.
ಶಿರೂರು ಸ್ವಾಮೀಜಿಯ ಆರಾಧನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ ಸಂಪೂರ್ಣವಾಗಿಲ್ಲ. ಪೊಲೀಸರು ಯಾಕೆ ಆ ತೀರ್ಮಾನಕ್ಕೆ ಬಂದಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.
ಮೈತ್ರಿ ಸರ್ಕಾರದ ಪ್ರಮಾಣ ವಚನಕ್ಕೆ ಆದ ಖರ್ಚಿನ ಬಗ್ಗೆ ಬಿಜೆಪಿ ಆಕ್ಷೇಪ ಅವರ ಸಣ್ಣತನ ತೋರಿಸುತ್ತದೆ. ರಾಜ್ಯಕ್ಕೆ ಬಂದ ಅತಿಥಿಗಳಿಗೆ ಊಟ ಕೊಟ್ಟದಕ್ಕೆ ಲೆಕ್ಕ ಹಾಕಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಸೋಲಿಗೆ ಹಿಂದೂಗಳ ನಿರ್ಲಕ್ಷ್ಯ ಕಾರಣ ಎಂದ ಜೆಡಿಎಸ್ ಶಾಸಕ ಭೋಜೆಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಭೋಜೆಗೌಡರ ಅಭಿಪ್ರಾಯ ನಾನೇಕೆ ಒಪ್ಪಿಕೊಳ್ಳಬೇಕು. ನಮ್ಮ ವಿಶ್ಲೇಷಣೆ ಬೇರೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.