ಶರತ್ ಮಡಿವಾಳ ಕೊಲೆ ಪ್ರಕರಣ ಏನಾಯ್ತು ಸ್ವಾಮಿ?
ಮಂಗಳೂರು, ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಹಲವು ದಿನಗಳಾಗಿವೆ. ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ಶರತ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದು ಕಡೆ ನಿಷೇಧಾಜ್ಞೆ ಜಾರಿಯಾಗಿ ಸುಮಾರು ಐವತ್ತು ದಿನಗಳಾಗುತ್ತಾ ಬಂದಿದೆ. ಇದರಿಂದ ಜನರು ರೋಸಿ ಹೋಗಿ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.
ಶರತ್ ಹತ್ಯೆಯ 'ಸ್ಫೋಟಕ ಮಾಹಿತಿ', ವಿಚಾರಣೆಯಿಂದ ದೂರ ಉಳಿದ ಸ್ವಾಮೀಜಿ
ಕೊಲೆ ಆದ ವ್ಯಕ್ತಿಯ ಬಗ್ಗೆ ಆತನ ಮನೆಯವರಿಂದ ಮಾಹಿತಿ ಪಡೆಯುವುದು ಸಾಮಾನ್ಯ ಪ್ರಕ್ರಿಯೆ. ಆತನ ಸ್ನೇಹಿತರು, ವ್ಯವಹಾರ ಹೀಗೆ ಹಲವು ಮಾಹಿತಿ ಪಡೆಯುತ್ತಾರೆ. ಕೊಲೆಯಾಗಿ ವಾರ ಕಳೆದರೂ ಈ ವರೆಗೆ ಶರತ್ ಮನೆಯವರಿಂದ ಪೊಲೀಸರು ಮಾಹಿತಿ ಪಡೆದಿಲ್ಲ.
ಈ ಬಗ್ಗೆ ಸ್ವತಃ ಶರತ್ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಶರತ್ ಕೊಲೆ ಪ್ರಕರಣ ರಾಜಕೀಯ ಪಕ್ಷಗಳಿಗೆ ತಮ್ಮ ವೋಟ್ ಬ್ಯಾಂಕ್ ಗಟ್ಟಿಗೊಳಿಸುವ ವಿಷಯವಾಗಿದೆ. ಇದೇ ಕಾರಣಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಯತ್ನಿಸುತ್ತಿದೆ.
ಪ್ರಕರಣ ಎನ್ಐಎಗೆ ಒಪ್ಪಿಸಲು ಆಗ್ರಹ
ಶರತ್ ಕುಟುಂಬಸ್ಥರಿಗೆ ರಾಜ್ಯ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ರಾಷ್ಟ್ರೀಯ ತನಿಖಾ ತಂಡ (ಎನ್ಐಎ)ಕ್ಕೆ ಪ್ರಕರಣವನ್ನು ಒಪ್ಪಿಸುವಂತೆ ತಂದೆ ತನಿಯಪ್ಪ ಆಗ್ರಹ ಮಾಡಿದ್ದಾರೆ. ಜೊತೆಗೆ ರಾಜ್ಯದ ಸಂಸದರು ಈ ಬಗ್ಗೆ ಗೃಹಸಚಿವ ರಾಜನಾಥ್ ಸಿಂಗ್ ಗೆ ಮಾಹಿತಿ ನೀಡಿ, ಶರತ್ ಕೊಲೆ ಪ್ರಕರಣವನ್ನು ಎನ್ಐಗೆ ಒಪ್ಪಿಸುವಂತೆ ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ದೆಹಲಿ ಮಟ್ಟದಿಂದ ಕೇಳಿಬರುತ್ತಿದೆ.
ನಮ್ಮ ಪೊಲೀಸರೇ ಸಮರ್ಥರು
ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎನ್ಐಎಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇವರ ಹಗ್ಗಜಗ್ಗಾಟದಿಂದ ಶರತ್ ಕೊಲೆ ಪ್ರಕರಣವನ್ನು ಚುನಾವಣೆವರೆಗೆ ಜೀವಂತವಿರಿಸಿ ನಂತರ ಹಳ್ಳ ಹಿಡಿಸುವ ಶತಾಯಗತಾಯ ಪ್ರಯತ್ನವನ್ನು ಎರಡೂ ಪಕ್ಷದ ನಾಯಕರು ಮಾಡುತ್ತಿರುವಂತಿದೆ.
ಸಾವು ಘೋಷಣೆ ವಿಚಾರವಾಗಿ ಸರಕಾರದ ಬಗ್ಗೆ ಗುಮಾನಿ
ಶರತ್ ಸಾವು ಜುಲೈ 6ರಂದು ನಡೆದಿದೆ ಎನ್ನಲಾಗುವ ದಾಖಲೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶರತ್ ಸಾವನ್ನು ಜುಲೈ 7ರಂದು ರಾತ್ರಿ ವೇಳೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಅಂದು ನಗರದ ಹೊರವಲಯದಲ್ಲಿರುವ ಅಡ್ಯಾರ್ ಗಾರ್ಡನ್ ನಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳ ಸಮಾವೇಶ ನಡೆದಿತ್ತು.
ಆ ಸಭೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕರು ಭಾಗಿಯಾಗಿದ್ದರು. ಈ ಸಭೆಗೆ ಶರತ್ ಪ್ರಕರಣ ಅಡ್ಡಿಯಾದೀತು ಎಂಬ ಕಾರಣಕ್ಕೆ ಶರತ್ ಸಾವನ್ನು ಅಂದು ಘೋಷಣೆ ಮಾಡಿರಲಿಲ್ಲ. ಮುಖ್ಯಮಂತ್ರಿ ಮಂಗಳೂರು ಬಿಟ್ಟು ತೆರಳಿದ ನಂತರ ಸಾವು ಘೋಷಣೆ ಮಾಡಲಾಗಿತ್ತು. ಕುಟುಂಸ್ಥರಿಗೂ ಸಾವಿನ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂಬ ವಾದವಿದೆ.
ಅಂಗದಾನ ಮಾಡಬೇಕೆಂದಿದ್ದರು
ಶರತ್ ತಂದೆಯು ಮಗನ ಅಂಗ ದಾನ ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು. ಶರತ್ ಪ್ರಾಣ ಬಿಟ್ಟು ಒಂದು ದಿನದ ನಂತರ ಅಂಗ ದಾನ ಸಾಧ್ಯವಾಗಲಿಲ್ಲ. ಸಾವು ಘೋಷಣೆ ವಿಚಾರವಾಗಿ ಸರಕಾರ, ಪೊಲೀಸ್ ಇಲಾಖೆ, ಆಸ್ಪತ್ರೆ ಎಲ್ಲವೂ ನಾಟಕದ ಪಾತ್ರಧಾರಿಗಳು ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಅಶ್ರಫ್ ಕಲಾಯಿ ಕೊಲೆ ಪ್ರಕರಣ ಅಷ್ಟು ಸುಲಭವಾಗಿ ಬಗೆಹರಿದಿದ್ದು ಹೇಗೆ?
ಈ ಪ್ರಕರಣವನ್ನು ನಾವು ತನಿಖೆ ನಡೆಸುತ್ತಿದ್ದೇವೆ, ಕೆಲವೇ ದಿನಗಳಲ್ಲಿ ಬಂಧಿಸುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಜೊತೆಗೆ ಕೆಲವು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆಂಬ ಮಾಹಿತಿ ಇದೆ. ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ವಾರದೊಳಗೆ ಬಂಧಿಸಿದ ಅದೇ ಪೊಲೀಸರು ಯಾಕೆ ಈ ಪ್ರಕರಣದಲ್ಲಿ ಯಶಸ್ಸು ಸಾಧಿಸುತ್ತಿಲ್ಲ ಎಂಬ ಪ್ರಶ್ನೆ ಜನರಿಂದಲೇ ಕೇಳಿಬರುತ್ತಿದೆ.
ಪೊಲೀಸರ ಕೈಯನ್ನು ಕಟ್ಟಿಹಾಕಲಾಗುತ್ತಿದೆಯೇ
ರಾಜ್ಯ ಪೊಲೀಸ್ ಮಹಾನಿರ್ದೇಶಕ, ಗುಪ್ತದಳ ಎಡಿಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳ ದಂಡೇ ಜಿಲ್ಲೆಗೆ ಬಂದು ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ದೊರಕಿದ್ದರೂ ಅವರನ್ನು ಬಂಧಿಸುತ್ತಿಲ್ಲ ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿಬರುತ್ತಿದೆ. ಶರತ್ ಕೊಲೆಗೆ ಮರಳು ಮಾಫಿಯಾ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಕೈಯನ್ನು ಕಟ್ಟಿಹಾಕಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಜಿಲ್ಲೆ ಕಂಡ ದೀರ್ಘಾವಧಿ ನಿಷೇಧಾಜ್ಞೆ
ಸುಮಾರು 50 ದಿನಗಳ ಕಾಲ ನಿರಂತರ ನಿಷೇಧಾಜ್ಞೆಯನ್ನು ಈ ಜಿಲ್ಲೆ ಮೊತ್ತ ಮೊದಲ ಬಾರಿಗೆ ನೋಡುತ್ತಿದೆ. ಈ ಹಿಂದೆ ಚರ್ಚ್ ಗಲಾಟೆ, ಕೋಮುಗಲಭೆ ಸಂದರ್ಭದಲ್ಲಿ ಮಂಗಳೂರು ನಗರಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ 144 ಸೆಕ್ಷನ್ ಇಡೀ ಜಿಲ್ಲೆಗೆ ಹೇರಿದ್ದು ಮೊದಲ ಬಾರಿ.
ಈ ಹಿಂದೆ 10ರಿಂದ 15 ದಿನಗಳ ಕಾಲ ನಿಷೇಧಾಜ್ಞೆ ಮುಂದುವರೆಯುತ್ತಿತ್ತು. ಆದರೆ ಈ ಬಾರಿ ಒಂದೂವರೆ ತಿಂಗಳು ನಿರಂತರ ನಿಷೇಧಾಜ್ಞೆ ಜಾರಿಯಲ್ಲಿದುದರಿಂದ ಸಾಮಾನ್ಯ ಜನರಿಗೆ ಹೆಚ್ಚು ತೊಂದರೆಯಾಗಿದೆ.
ಮಳೆಯಲ್ಲೂ ಕಾವಲು ಕಾಯುವ ಪೊಲೀಸರು
ಗಲಭೆ ಪ್ರಕರಣದಿಂದ ಸಾಮಾನ್ಯರಿಗೆ ಎಷ್ಟು ಕಷ್ಟವಾಗಿದೆಯೋ ಅಷ್ಟೇ ಕಷ್ಟವನ್ನು ಪೊಲೀಸರೂ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದರೂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಬಂದೋಬಸ್ತ್ ಏರ್ಷಡಿಸುವುದು ಪೊಲೀಸರ ಕೆಲಸವಾಗಿದೆ. ಆದ್ದರಿಂದ ನಿರಂತರ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಪೊಲೀಸರು ಬಂದೋಬಸ್ತ್ ಮಾಡುತ್ತಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಪೊಲೀಸ್ ವಾಹನ, ಸರಕಾರಿ ಕಟ್ಟಡಗಳಲ್ಲಿ ವಾಸ್ತವ್ಯ ಹೂಡಿರುವ ಪೊಲೀಸರ ಪಾಡು ಹೇಳತೀರದು. ಕಳೆದೊಂದು ತಿಂಗಳಿಂದ ಕುಟುಂಬಸ್ಥರ ಮುಖವನ್ನೇ ನೋಡದೇ ಪೊಲೀಸರ ಪರಿಸ್ಥಿತಿ ಅಯ್ಯೋ ಅನಿಸುವಂತಾಗಿದೆ.
ಮಾಧ್ಯಮಗಳಿಂದ ತುಪ್ಪ ಸುರಿಯುವ ಕೆಲಸ
ಸದ್ಯ ಜಿಲ್ಲೆಯ ಪರಿಸ್ಥಿತಿ ಶಾಂತವಾಗಿದ್ದು, ಗಲಭೆ ಬಗ್ಗೆ ದಿನಂಪ್ರತಿ ವಾಹಿನಿಗಳಲ್ಲಿ ಚರ್ಚೆ ನಡೆಸುವ ಮೂಲಕ ಆರಿದ ಕಿಡಿಯನ್ನು ಹೊತ್ತಿಸಲು ಪ್ರಾರಂಭಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಸಣ್ಣ ಪುಟ್ಟ ಹೊಡೆದಾಟವಾದರೂ ಅದನ್ನು ದೊಡ್ಡ ರೀತಿಯಲ್ಲಿ ಸುದ್ದಿ ಮಾಡುವುದರಿಂದ ಜಿಲ್ಲೆಗೆ ಕಪ್ಪುಚುಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ ವಾಹಿನಿಯ ಪ್ರಕಾರ ಇನ್ನೂ ಗಲಭೆ ಹೊತ್ತಿ ಉರಿಯುತ್ತಿದೆ ಎಂದು ಹೇಳಿಕೆ ಕೊಡುವ ಮೂಲಕ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಧ್ಯಮದ ವಿರುದ್ದ ಜನರು ತಿರುಗಿ ಬಿದ್ದಿದ್ದಾರೆ.
ಹೊರ ಜಿಲ್ಲೆ, ದೇಶದವರ ಮುಂದೆ ಮಾನ ಹರಾಜು
ಸಾಮಾನ್ಯವಾಗಿ ಮಂಗಳೂರಿಗರು ದೂರದ ಅರಬ್ ರಾಷ್ಟ್ರ, ಯುರೋಪ್, ಅಷ್ಟೇ ಏಕೆ ಬೆಂಗಳೂರು, ಮುಂಬೈ ಮಹಾನಗರಗಳಲ್ಲಿ ವಾಸಿಸುತ್ತಿದ್ದಾರೆ. ಹೊರ ಜಿಲ್ಲೆ, ರಾಜ್ಯ, ದೇಶದವರು ನಮ್ಮನ್ನು ನೋಡಿ ನಗುತ್ತಿದ್ದಾರೆ. ಬುದ್ಧಿವಂತರ ಜಿಲ್ಲೆ ಅನಿಸಿಕೊಂಡು ಧರ್ಮಕ್ಕಾಗಿ ಯುದ್ದ ಮಾಡುವವರು ಎನ್ನುವ ಮೂಲಕ ಜಿಲ್ಲೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳುತ್ತಾರೆ ಮಂಗಳೂರಿನ ಅನಿವಾಸಿಗಳು.
"ನಾನು ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದು, ನನ್ನ ಜೊತೆ ಹೊರ ಜಿಲ್ಲೆ ಹಾಗೂ ರಾಜ್ಯದವರಿದ್ದಾರೆ. ಅಲ್ಲಿ ಎಲ್ಲಾ ಧರ್ಮದವರೂ ಇದ್ದಾರೆ. ನೀವು ಯಾವ ರೀತಿಯಲ್ಲಿ ಬುದ್ಧಿವಂತರಾದರೂ ಧರ್ಮದ ವಿಚಾರದಲ್ಲಿ ಬುದ್ಧಿಹೀನರು ಎಂಬುವುದಾಗಿ ಹೇಳುವಾಗ ನಮ್ಮ ಜಿಲ್ಲೆ ಬಗ್ಗೆ ನಮಗೇ ಅಸಹ್ಯ ಭಾವನೆ ಬರುತ್ತದೆ. ಇನ್ನಾದರೂ ಈ ಮತಾಂಧರು ಸರಿಯಾಗಲಿ" ಎನ್ನುತ್ತಾರೆ ಶಶಿರಾಜ್.