ಮಂಗಳೂರು: ಶಾಲೆಗಳಿಗೆ ದಸರಾ ರಜೆ ಅ. 27ರ ವರೆಗೆ ವಿಸ್ತರಣೆ
ಮಂಗಳೂರು, ಅಕ್ಟೋಬರ್. 08 : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಲಾಗಿದೆ. ಅಕ್ಟೋಬರ್ 24ರ ವರೆಗಿದ್ದ ರಜೆಯನ್ನು ಅಕ್ಟೋಬರ್ 27ರ ವರೆಗೆ ವಿಸ್ತರಿಸಲಾಗಿದೆ.
ಪ್ರತಿಭಟನೆಗಳು, ಬಂದ್ ನಿಂದಾಗಿ ಶಾಲೆಗಳಿಗೆ ಸಾಲು ಸಾಲು ರಜೆಗಳು ಸಿಕ್ಕಿದ್ದವು. ಇದರಿಂದ ಬೋಧನಾ ಅವಧಿ ಕಡಿಮೆಯಾಗುವ ಹಿನ್ನಲೆಯಲ್ಲಿ ಒಟ್ಟು 6 ದಿನಗಳ ರಜೆಯನ್ನು ಸರಿದೂಗಿಸಲು ಈ ಹಿಂದೆ ಆದೇಶ ನೀಡಲಾಗಿತ್ತು. ಆದರೆ ಆಯಾ ಜಿಲ್ಲೆಗಳ ಪರಿಸ್ಥಿಗೆ ಅನುಗುಣವಾಗಿ ಇದೀಗ ರಜೆಯನ್ನು ಮರುಹೊಂದಾಣಿಕೆ ಮಾಡಲಾಗಿದೆ. ಒಂದು ಅಥವಾ ಎರಡು ದಿನ ರಜೆ ನೀಡಿರುವ ದ.ಕ ಮತ್ತು ಉಡುಪಿ ಸೇರಿದಂತೆ 11 ಜಿಲ್ಲೆಗಳಿಗೆ ಅಕ್ಟೋಬರ್. 28ಕ್ಕೆ ಶಾಲೆಗಳನ್ನು ಆರಂಭಿಸಲು ಆಯುಕ್ತರು ಆದೇಶ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ದ.ಕ ಹಾಗೂ ಉಡುಪಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆಯನ್ನು ವಿಸ್ತರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇವರ ಮನವಿಗೆ ಶಿಕ್ಷಣ ಇಲಾಖೆ ಸ್ಪಂದಿಸಿದೆ.
ದಸರಾ ರಜೆಯನ್ನು ವಿಸ್ತರಿಸಿದ ರಾಜ್ಯ ಶಿಕ್ಷಣ ಇಲಾಖೆ ಸಚಿವರಿಗೆ, ಅಧಿಕಾರಿಗಳಿಗೆ ಹಾಗೂ ನಮ್ಮ ಮನವಿಗೆ ಸ್ಪಂದಿಸಿದ ಜನಪ್ರತಿನಿಧಿಗಳಿಗೆ ರಾಜ್ಯ ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು ಹಾಗೂ ದ.ಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಶಿವಶಂಕರ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.