ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಾಲಯ ಆಗಬಾರದು: ಸಿದ್ದರಾಮಯ್ಯ
ಮಂಗಳೂರು, ಜನವರಿ 7: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 76 ಕೋಟಿ ರೂಪಾಯಿ ವೆಚ್ಚದ ಅಭಿವೃದಿ ಕಾಮಗಾರಿಗಳನ್ನು ಉದ್ಘಾಟಿಸಿದರು . ಈ ನಡುವೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ಮೃತಪಟ್ಟ ದೀಪಕ್ ರಾವ್ ಹಾಗು ಅಬ್ದುಲ್ ಬಷೀರ್ ಅವರ ಸಾವಿಗೆ ಸಂತಾಪ ಸೂಚಿಸಲಾಯಿತು.
ನಂತರ ಕಾರ್ಯಕ್ರಮವನ್ನು ಉದೇಶಿಸಿ ಮಾತನಾಡಿದ ಅವರು, "ನಾವು ವಿಶ್ವ ಮಾನವರಾಗಬೇಕು. ಮೊದಲು ನಾವು ಮನುಷ್ಯರಾಗಿ ಸ್ವಾಭಿಮಾನದಿಂದ ಬದುಕಲು ಕಲಿಯಬೇಕು," ಎಂದು ಕರೆ ನೀಡಿದರು.
"ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದದ ಪ್ರಯೋಗಾಲಯ ಆಗಬಾರದು. ನಾವು ಧರ್ಮ ಪಾಲಕರಾಗಬೇಕೇ ಹೊರತು ಯಾವತ್ತಿಗೂ ಧರ್ಮ ವಿರೋಧಿಯಾಗಬಾರದು," ಎಂದು ಸಿದ್ದರಾಮಯ್ಯ ಹೇಳಿದರು.
"ಸಮಾಜದ ಶಾಂತಿ ಕದಡುವವರ ವಿರುದ್ಧ ಹೋರಾಟ ನಡೆಸುವ ಅವಶ್ಯಕತೆ ಇದೆ. ಸತ್ತವರ ಹೆಣದ ಮೇಲೆ ರಾಜಕೀಯ ಮಾಡುತ್ತಿರುವುದು ಖಂಡನೀಯ," ಎಂದು ಬಿಜೆಪಿ ವಿರುದ್ದ ಸಿಎಂ ವಾಗ್ದಾಳಿ ನಡೆಸಿದರು. 'ಇಂತಹವರ ವಿರುದ್ಧ ನಾವು ಸಮರ ಸಾರಬೇಕು. ಸಮಾಜದಲ್ಲಿ ನೆಮ್ಮದಿ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ,' ಎಂದು ಅವರು ಅಭಿಪ್ರಾಯಪಟ್ಟರು.