ಉಜಿರೆಯಲ್ಲಿ ಮಂಗನ ಕಳೆಬರಹ ಪತ್ತೆ: ಹೆಚ್ಚಿತು ಮಂಗನ ಕಾಯಿಲೆ ಭೀತಿ
ಮಂಗಳೂರು, ಜನವರಿ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಂಗನ ಕಳೆ ಬರಹ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹೌದು, ಉಜಿರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
4 ಅಥವಾ 5 ದಿನಗಳ ಹಿಂದೆ ಈ ಮಂಗ ಸತ್ತಿರಬಹುದೆಂದು ಶಂಕಿಸಲಾಗಿದ್ದು, ಮಂಗನ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಮಂಗನ ದೇಹವನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಅಸಾಧ್ಯವಾದ ಸ್ಥಿತಿಯಲ್ಲಿದ್ದ ಕಾರಣಕ್ಕೆ ಮೃತದೇಹವನ್ನು ಸುಟ್ಟು ಹಾಕಲಾಗಿದೆ.
ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು
ಮಂಗನ ಶವ ಸಿಕ್ಕಿರುವ ಪರಿಸರದಲ್ಲಿ ಕೀಟನಾಶಕ ಸಿಂಪಡಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಮಂಗ ಸಾವನ್ನಪ್ಪಿದ್ದಾದರೂ ಹೇಗೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ಮಂಗನ ದೇಹ ಪ್ರಯೋಗಾಲಯಕ್ಕೂ ಕಳುಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮಂಗನ ಕಾಯಿಲೆಯ ಭೀತಿ ಇರುವುದರಿಂದ ಪರಿಸರದಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.