ಕುಖ್ಯಾತ ಶಾರ್ಪ್ ಶೂಟರ್ ರಶೀದ್ ಮಲಬಾರಿ ಅಬುದಾಬಿಯಲ್ಲಿ ಬಂಧನ?
ಮಂಗಳೂರು ಜೂನ್ 29: ಭೂಗತ ಲೋಕವನ್ನೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಈಗ ಹೊರಬಿದ್ದಿದೆ. ಡಿ ಕಂಪೆನಿಯ ಕುಖ್ಯಾತ ಶಾರ್ಪ್ ಶೂಟರ್ ರಶೀದ್ ಮಲಬಾರಿ ಅಬುದಾಬಿಯಲ್ಲಿ ಬಂಧನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೇ ತಿಂಗಳಲ್ಲೇ ಬಂಧಿಸಿರುವ ಬಗ್ಗೆ ಮಾಹಿತಿ ದೊರೆತಿದ್ದು, ಬಾಂಗ್ಲಾದೇಶ ಪಾಸ್ ಪೋರ್ಟ್ ಹೊಂದಿರುವ ರಶೀದ್ ಮಲಬಾರಿ ಅಬುದಾಬಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗಿದೆ. ಈ ಕುರಿತು ರಾಜ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಳೆದ 4 ವರ್ಷಗಳಿಂದ ರಶೀದ್ ಗಾಗಿ ರಾಜ್ಯ ಪೊಲೀಸರು ಹುಡುಕುತ್ತಿದ್ದು, ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಅಬುದಾಬಿಯಲ್ಲಿ ಬಂಧನವಾಗಿರುವ ವ್ಯಕ್ತಿ ರಶೀದ್ ಮಲಬಾರಿಯೇ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.
ಹಲವಾರು ಶೂಟೌಟ್, ಕೊಲೆ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ರಶೀದ್ ಮಲಬಾರಿ 2014, ಜುಲೈ 21 ರಂದು ರಾಜ್ಯ ಹೈಕೋರ್ಟ್ ಆದೇಶದಂತೆ ಬೆಂಗಳೂರು ಕಾರಾಗೃಹ ಬೇಲ್ ಮೇಲೆ ಹೊರ ಬಂದು ಏಕಾಏಕಿ ಕಣ್ಮರೆಯಾಗಿದ್ದ.
ರಶೀದ್ ಜೈಲಿನಿಂದ ಹೊರಬರುವ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ ಬೆಂಗಳೂರು ಪೊಲೀಸರ ಬೇಜವಬ್ದಾರಿಯಿಂದ ಆತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.
ಮಾಹಿತಿಗಳ ಪ್ರಕಾರ ರಶೀದ್ ಬೆಂಗಳೂರಿನಿಂದ ನೇರವಾಗಿ ಮುಂಬೈಗೆ ತೆರಳಿ, ಮುಂಬೈನಿಂದ ಸಮುದ್ರ ಮಾರ್ಗದ ಮೂಲಕ ಕೊಲ್ಲಿ ರಾಷ್ಟ್ರಕ್ಕೆ ಪರಾರಿಯಾಗಿದ್ದ ಬಗ್ಗೆ ಮಾಹಿತಿ ಇತ್ತು.
ಅತ್ಯಂತ ಅಪಾಯಕಾರಿ ಡಿ ಕಂಪೆನಿಯ ಪಂಟರ್ ಅಂತಾನೆ ಗುರುತಿಸಿಕೊಂಡಿರುವ ರಶೀದ್ ಮಲಬಾರಿ ಈ ಹಿಂದೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ವರುಣ್ ಗಾಂಧಿ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಎನ್ನಲಾಗಿದೆ.
ರಶೀದ್ ಹುಸೈನ್ ಶೇಖ್ ಯಾನೆ ರಶೀದ್ ಮಲಬಾರಿ ಯಾನೆ ನಾರಾಯಣ್ ಯಾನೆ ನಾಯಕ್ ಯಾನೆ ಬಿಗ್ ಬೋಸ್ ಯಾನೆ ಡಬ್ಬಲ್ ಎಂದೇ ಗುರುತಿಸಲ್ಪಡುವ ಈತ ಮುಂಬಯಿ ಅಂಡರ್ ವರ್ಲ್ಡ್ ಕಂಡ ಕುಖ್ಯಾತ ಶಾರ್ಪ ಶೂಟರ್.