'ಟಿಪ್ಪು ಗೋಹತ್ಯೆ ಮಾಡಿದ ಉಲ್ಲೇಖ ಇತಿಹಾಸದಲ್ಲಿ ಇಲ್ಲ'
ಮಂಗಳೂರು,ನವೆಂಬರ್, 30: ಗೋಮಾತೆ ದೇಶದ ಸಂಸ್ಕೃತಿಯ ಮೂಲ. ದೇಶದ ಕೃಷಿಗೆ ಮುಖ್ಯ ಆಧಾರವಾದ ಗೋವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಾರಣಾಸಿಯ ಖ್ಯಾತ ಗೋಕಥಾ ನಿರೂಪಕ ಫಯಾಝ್ ಖಾನ್ ಹೇಳಿದ್ದಾರೆ.
ಮಂಗಳೂರಿನ ನಮೋ ಬ್ರಿಗೇಡ್ ಸಂಸ್ಥೆ ಆಯೋಜಿಸಿದ್ದ 'ಅಂಬೆಯ ಕೂಗು-ಗೋವಿನ ಕಥೆ' ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರವಚನ ನೀಡಿದ ಫಯಾಝ್ ಖಾನ್, 'ಗೋವು ದೇಶದ ಕೃಷಿ, ಜನರ ಆರೋಗ್ಯವನ್ನು ಕಾಪಾಡುವ ಕಾಮಧೇನು. ಎಲ್ಲಿ ಗೋ ಸಂಪತ್ತನ್ನು ನಿರ್ಲಕ್ಷ್ಯ ಮಾಡಲಾಗುತ್ತದೆಯೇ ಅಲ್ಲಿ ಕೃಷಿ ಕುಂಠಿತವಾಗುತ್ತದೆ' ಎಂದು ಹೇಳಿದರು.[ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]
ಟಿಪ್ಪುಸುಲ್ತಾನ್ ಗೋ ಹತ್ಯೆ ಮಾಡಿದ ಉಲ್ಲೇಖ ಇತಿಹಾಸದ ಯಾವುದೇ ಪುಟಗಳಲ್ಲಿ ಸಿಗುವುದಿಲ್ಲ. ಆತ ಗೋಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುತ್ತಿದ್ದನು. ಟಿಪ್ಪು ಹೆಸರಿನಲ್ಲಿ ರಾಜಕೀಯ ಮಾಡುವವರು ಟಿಪ್ಪುವಿನ ಈ ಕಾನೂನನ್ನು ಪಾಲಿಸಬೇಕಾಗಿದೆ ಎಂದು ಟಿಪ್ಪುವಿನ ಕುರಿತಾಗಿ ಇರುವ ಹಲವಾರು ಗೊಂದಲಗಳನ್ನು ಪರಿಹರಿಸಿದರು.
ಗೋ ಮಾಂಸ ಮುಸ್ಲಿಂ ಜನಾಂಗದ ಆಹಾರ ಸಂಸ್ಕೃತಿ ಎಂದು ಬಿಂಬಿಸಲಾಗುತ್ತಿದೆ. ಆದರೆ, ಮಹಮ್ಮದ್ ಪೈಗಂಬರರು ಗೋವಿನ ಹಾಲು ಹಾಗೂ ತುಪ್ಪವನ್ನು ಔಷಧವೆಂದು ಹೇಳಿದ್ದಾರೆ. ಅಲ್ಲದೆ ಆಡು, ಒಂಟೆ, ಕುದುರೆ ಮಾಂಸಗಳನ್ನು ಇಷ್ಟ ಪಟ್ಟಿರುವ ಉಲ್ಲೇಖವಿದೆಯೋ ಹೊರತು ಗೋ ಮಾಂಸ ಸೇವಿಸಿರುವುದಕ್ಕೆ ಯಾವುದೇ ಉಲ್ಲೇಖವಿಲ್ಲ ಎಂದರು.[ಕೊಲ್ಲೂರು ದೇವಳದಲ್ಲಿ ಟಿಪ್ಪು ಹೆಸರಿನಲ್ಲಿ ನಿತ್ಯಪೂಜೆ]
ದೇಶದಲ್ಲಿ ಬೀಸುತ್ತಿರುವ ಅಸಹಿಷ್ಣುತೆ ಎಂಬ ಪದ ಅರ್ಥಹೀನವಾದದ್ದು. ಎಲ್ಲಾ ಧರ್ಮೀಯರು ಸಹಿಷ್ಣುಗಳಾಗಿಯೇ ಬಾಳಿ ಬದುಕಿದ ನೆಲದಲ್ಲಿ ಇದ್ದಕ್ಕಿದ್ದಂತೆ ಅಸಹಿಷ್ಣುತೆ ಎಂಬ ಪದವನ್ನು ಬಳಸಿ ವಾತಾವರಣವನ್ನು ಹಾಳುಮಾಡುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ. ಜನರು ಈ ವಿಚಾರದಲ್ಲಿ ವಿಚಾರವಂತರಾಗುವುದು ಮುಖ್ಯ ಎಂದು ಸಲಹೆ ನೀಡಿದರು.