ರಸ್ತೆ ಸ್ವಚ್ಛತೆ ಮಾಡುತ್ತಿರುವ ಮಂಗಳೂರಿನ ಈ ತಾಯಿ ಈಗ ದೇಶವಿಖ್ಯಾತ
ಮಂಗಳೂರು, ಡಿಸೆಂಬರ್ 26: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಚ್ಛ ಭಾರತ್ ಅಭಿಯಾನಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಸ್ವಚ್ಛ ಭಾರತ್ ಅಭಿಯಾನದಡಿ ದೇಶದ ಹಲವು ನಗರಗಳಲ್ಲಿ ಪ್ರತಿವಾರ ಜನರು ತಮ್ಮನ್ನು ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
ಸ್ವಚ್ಛ ಭಾರತ ಅಭಿಯಾನಕ್ಕೆ ಒಂದೆಡೆ ದೇಶವೇ ಸಾಥ್ ನೀಡುತ್ತಿದ್ದರೆ ಇನ್ನೊಂದೆಡೆ ವಿವಿಧ ಸಂಘ ಸಂಸ್ಥೆಗಳು ಸ್ವಚ್ಛತಾ ಅಭಿಯಾನ ನಡೆಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ . ಮಂಗಳೂರಿನಲ್ಲಿ ಪ್ರತಿ ವಾರ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ನಡೆಸುತ್ತಿದೆ. 4 ನೇ ಹಂತದ 8 ನೇ ರವಿವಾರದ ಶ್ರಮದಾನ ಫೊಟೊ ಇಡೀ ದೇಶವನ್ನೇ ಆಕರ್ಷಿಸುತ್ತಿದೆ .
ನಗರದ ಹಂಪನಕಟ್ಟೆ ಪರಿಸರದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಮಂಗಳೂರು ಅಭಿಯಾನದ ಶ್ರಮದಾನ ಕಾರ್ಯಕ್ರಮದಲ್ಲಿ ಸುದೀಕ್ಷಾ ಹಾಗೂ ಕಿರಣ್ ಪೂಜಾರಿ ದಂಪತಿ ತಮ್ಮ ಒಂದು ವರ್ಷದ ಪುಟ್ಟ ಮಗು 'ನಕ್ಷ' ಳೊಂದಿಗೆ ಪಾಲ್ಗೊಂಡಿದ್ದರು. ಮಗುವನ್ನು ಎದೆಗೆ ಕಟ್ಟಿಕೊಂಡು ಸುದೀಕ್ಷಾ ರಸ್ತೆಯ ಕಸ ಗುಡಿಸುತ್ತಿದ್ದರೆ, ಪತ್ನಿ ಗುಡಿಸಿದ ಕಸ ವನ್ನು ಪತಿ ಕಿರಣ್ ಪೂಜಾರಿ ಸಂಗ್ರಹಿಸುತ್ತಿದ್ದರು.
ಕ್ಯಾಮರಾ ಕಣ್ಣಿಗೆ ಸಿಕ್ಕ ಸುದೀಕ್ಷಾ ಹಾಗೂ ಕಿರಣ್ ಪೂಜಾರಿ ದಂಪತಿಯ ಈ ಫೊಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ . ಸ್ವಚ್ಛ ಭಾರತ್ ಅಭಿಯಾನಕ್ಕೆ ದಂಪತಿಯ ಕೊಡುಗೆ ಪ್ರಶಂಸೆಗೆ ಪಾತ್ರವಾಗಿದೆ.