ಕುಕ್ಕೆ ಸುಬ್ರಹ್ಮಣ್ಯ, ಇದೇನು ನಿನ್ನ ಕ್ಷೇತ್ರದಲ್ಲಿ ಭುಗಿಲೆದ್ದಿರುವ ವಿವಾದ?
Recommended Video
ಮಂಗಳೂರು, ಸೆಪ್ಟೆಂಬರ್ 4: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕರ್ನಾಟಕಕ್ಕೆ ಅಷ್ಟೇ ಅಲ್ಲ, ಇಡೀ ಭಾರತದಲ್ಲೇ ಬಹಳ ಖ್ಯಾತಿ ಪಡೆದ ಹಾಗೂ ಜನರು ನಂಬಿಕೆಯಿಂದ ನಡೆದುಕೊಳ್ಳುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ, ಸರ್ಪ ಸಂಸ್ಕಾರ ಹಾಗೂ ಕಾಳಸರ್ಪ ದೋಷ ನಿವಾರಣೆ, ರಾಹು-ಕೇತು ದೋಷ ನಿವಾರಣೆ ಸೇರಿದಂತೆ ವಿವಿಧ ದೋಷಗಳಿಗಾಗಿ ಪೂಜೆ ಮಾಡಲಾಗುತ್ತದೆ.
ಕುಮಾರಾದ್ರಿ ಅಥವಾ ಕುಕ್ಕೆ ಸುಬ್ರಹ್ಮಣ್ಯ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ. ಸುಬ್ರಹ್ಮಣ್ಯ ದೇವಾಲಯ ಹಾಗೂ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಮಧ್ಯದ ವಿವಾದ ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠ ಇಂದು ಆಸ್ತಿಕ ವರ್ಗದ ಮನಸ್ಸಿನಲ್ಲಿ ಹಲವಾರು ಗೊಂದಲಗಳನ್ನು ಹುಟ್ಟುಹಾಕಿದೆ.
ಯಾವ ಸಮಸ್ಯೆ ನಿವಾರಣೆಗೆ ಯಾವ ತುಲಾ ಭಾರ ಸೇವೆ ಶ್ರೇಷ್ಠ?
ದೇಶದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಠಕ್ಕೆ ಒಪ್ಪಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಇನ್ನೊಂದೆಡೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ರಾಜ್ಯ ಸರಕಾರ ಸುಪರ್ದಿಗೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಪುರಾತನ ದಾಖಲೆಗಳ ಪ್ರಕಾರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಸೇರಬೇಕು ಎಂಬ ಕೂಗು ಕೇಳಿಬರುತ್ತಿದೆ.
ದೇವಾಲಯವನ್ನು ಮಠಕ್ಕೆ ವಹಿಸಬೇಕು ಎಂಬ ವಾದ
ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ ಅವರೊಂದಿಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ, ದಾಖಲೆಯನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ. ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಪರವಾಗಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಖಾಡಕ್ಕಿಳಿದು ದೇವಾಲಯವನ್ನು ಈ ಕೂಡಲೇ ಮಠಕ್ಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ಪತ್ರಿಕಾ ಹೇಳಿಕೆ ನೀಡಿದ್ದು, ದೇವಸ್ಥಾನದ ರಶೀದಿ ಪಡೆಯದೆ, ದೇವಸ್ಥಾನದ ವತಿಯಿಂದ ನಡೆಸದ, ಇತರ ಖಾಸಗಿ ಮಠ ಮಂದಿರಗಳಲ್ಲಿ ಅಥವಾ ನದೀ ತೀರದಲ್ಲಿ ನಡೆಸುವ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ, ಸುಬ್ರಹ್ಮಣ್ಯ ದೇವರಿಗೆ ಸಲ್ಲುವುದಿಲ್ಲ. ಭಕ್ತರು ಇಂತಹವರನ್ನು ಆಶ್ರಯಿಸಿ ಮೋಸ ಹೋಗಬಾರದು ಎಂದು ಹೇಳಿ, ಭಾರೀ ವಿವಾದ ಸೃಷ್ಟಿಸಿದ್ದಾರೆ.
ಶಂಕರಾಚಾರ್ಯರು, ಮಧ್ವಾಚಾರ್ಯರು ಮಠಕ್ಕೆ ಬಂದಿದ್ದರ ಉಲ್ಲೇಖ
ಈ ಮಠ ಹಾಗೂ ದೇವಾಲಯದ ವಿವಾದ ಮತ್ತು ಇತಿಹಾಸ ಕೆದಕುತ್ತಾ ಹೋದರೆ ಹಲವಾರು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಸುಬ್ರಹ್ಮಣ್ಯ ಮಠ ಮತ್ತು ದೇವಸ್ಥಾನಕ್ಕೆ ಅವಿನಾಭಾವ ಸಂಬಂಧ ಇದ್ದು, ಈ ಸಂಬಂಧಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಕ್ಷೇತ್ರದ ಇತಿಹಾಸದ ಪ್ರಕಾರ ಶಂಕರಾಚಾರ್ಯರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದ ಉಲ್ಲೇಖ ಇದೆ. ಅವರಂತೆಯೇ ವೈದಿಕ ಪರಂಪರೆಯಲ್ಲಿ ಬಂದು, ದ್ವೈತ ಮತವನ್ನು ಪ್ರವರ್ತಿಸಿದ ಮಧ್ವಾಚಾರ್ಯರು ಸುಬ್ರಹ್ಮಣ್ಯಕ್ಕೆ ಬಂದಿದ್ದರು ಎಂದು ಹೇಳಲಾಗುತ್ತದೆ. ಅವರು ದೇವಾಲಯದ ನಿರ್ವಹಣೆಯನ್ನು ತನ್ನ ಸುಪರ್ದಿಗೆ ವಹಿಸಿಕೊಂಡು, ನಿತ್ಯ ಕರ್ಮಾಚರಣೆಗಳನ್ನು ಮಾಧ್ವ ಸಂಪ್ರದಾಯ ರೀತ್ಯಾ ಪುನಃ ಸ್ಥಾಪಿಸಿ, ಸುಲಲಿತವಾಗಿ ನಿತ್ಯ ವಿನಿಯೋಗಗಳನ್ನು ನಡೆಸಿಕೊಂಡು ಹೋಗಲು ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ. ಆದರೆ ಅದರ ಬಗ್ಗೆ ದಾಖಲೆಗಳು ಇದ್ದರೂ ಅದನ್ನು ಕ್ಷೇತ್ರದ ಇತಿಹಾಸದಲ್ಲಿ ಉಲ್ಲೇಖಿಸದೆ ಮುಚ್ಚಿಡಲಾಗಿದೆ ಎಂದು ಅರೋಪ ಕೂಡ ಇದೆ.
ಕುಕ್ಕೆಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ: ಇತಿಹಾಸ, ಆಚರಣೆ ಮಹತ್ವ
ಮಠದ ಸ್ವಾಮಿಗಳಿಂದ ಫಲ-ಮಂತ್ರಾಕ್ಷತೆ ಪಡೆಯುತ್ತಾರೆ
ಪ್ರಾಚೀನ ಕಾಲದಲ್ಲಿ ದೇವಳದ ಸಮಗ್ರ ಉಸ್ತುವಾರಿಯು ಮಠದ ಸ್ವಾಮೀಜಿ ನಿರ್ವಹಿಸುತ್ತಿದ್ದರೂ ಕಾಲಾಂತರದಲ್ಲಿ ದೇವಸ್ಥಾನವನ್ನು ಸರಕಾರಗಳು ಸ್ವಾಧೀನ ಪಡಿಸಿಕೊಂಡು, ವ್ಯವಸ್ಥಾಪನಾ ಸಮಿತಿಗಳು ಕಾರ್ಯಾಚರಣೆ ನಡೆಸಲು ಪ್ರಾರಂಭವಾದ ಬಳಿಕ ಶ್ರೀ ಮಠದ ಸ್ವಾಮೀಜಿಗೆ ದೇವಸ್ಥಾನದ ಆಡಳಿತದಲ್ಲಿ ಇದ್ದ ಹಿಡಿತವೂ ಕ್ರಮೇಣ ಕಡಿಮೆಯಾಗುತ್ತಾ ಬಂದಿತು. ಇಷ್ಟೆಲ್ಲಾ ಬದಲಾವಣೆಗಳು ಆದರೂ ಇಂದಿಗೂ ದೇವಸ್ಥಾನದಲ್ಲಿ ಪೂಜೆ ಮಾಡುವ ಅಧಿಕಾರ ಹೊಂದಿರುವ ಎಡಪಡಿತ್ತಾಯ ಮತ್ತು ನೂರಿತ್ತಾಯ ಕುಟುಂಬಿಕರು ನೂತನವಾಗಿ ಪೂಜೆಗೆ ನಿಯುಕ್ತಿಗೊಳ್ಳುವ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮಠದ ಸ್ವಾಮಿಗಳಿಂದ ಫಲ- ಮಂತ್ರಾಕ್ಷತೆಯನ್ನು ಪಡೆದು, ಅವರಿಂದ ಮಂತ್ರೋಪದೇಶ ಪಡೆದು ಪೂಜೆಯನ್ನು ಪ್ರಾರಂಭಿಸುವ ಪದ್ಧತಿಯು ದೇವಸ್ಥಾನದಲ್ಲಿ ಆಚರಣೆಯಲ್ಲಿ ಇದೆ.
ಧಾರ್ಮಿಕ ದತ್ತಿ ಇಲಾಖೆ ಲಿಖಿತವಾಗಿ ಹೇಳಿದೆ: ಮಠ
ಅಲ್ಲದೆ, ಪೂಜೆಗೆ ನಿಯುಕ್ತರಾದ ಅರ್ಚಕ ವರ್ಗದವರಿಗೆ ಯಾವುದೇ ರೀತಿಯ ಮೈಲಿಗೆಗಳು ಬಂದಾಗ, ಸುಬ್ರಹ್ಮಣ್ಯ ದೇವರ ಪೂಜೆಯನ್ನು ಸಹ ಶ್ರೀ ಮಠದ ಸ್ವಾಮಿಗಳೇ ನೆರವೇರಿಸುವ ಪದ್ಧತಿ ಇದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 1886ರ ವರೆಗೂ ಸುಬ್ರಹ್ಮಣ್ಯ ಮಠದ ಆಧೀನದಲ್ಲೇ ಇತ್ತು. ಈ ಬಗ್ಗೆ ಬ್ರಿಟಿಷ್ ಅಧಿಕಾರಿಯೊಬ್ಬರು ಜರ್ನಿ ಟು ಕೂರ್ಗ್ ಮಲಬಾರ್ ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 1950ರಲ್ಲಿ ದೇವಸ್ಥಾನವನ್ನು ಸರಕಾರ ಸುಪರ್ದಿಗೆ ತೆಗೆದುಕೊಂಡಿತು. ಆದರೆ 1889ರಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ ವ್ಯಾಜ್ಯವೊಂದರ ತೀರ್ಪಿನಲ್ಲಿ ಕೂಡ ಮಠ ಅಧೀನದ ದೇವಸ್ಥಾನ ಎಂದು ಉಲ್ಲೇಖಿಸಿದೆ. ಸರ್ವೇ ನಂಬರು 82/1, 82/3 ಹಾಗೂ 82/11ರಲ್ಲಿ ದೇವಸ್ಥಾನ, ಆವರಣ, ಪೂಜೆ ನಡೆಯುವ ಸ್ಥಳ ಎಲ್ಲವೂ ಮಠದ ಸ್ವತ್ತು ಎಂದು ಉಲ್ಲೇಖಿಸಲಾಗಿದೆ. ಆದರೆ ದೇವಸ್ಥಾನ ಸರಕಾರದ ವಶಕ್ಕೆ ಬಂದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯೇ ಲಿಖಿತವಾಗಿ ಹೇಳಿದೆ ಎಂಬುದು ಮಠದ ಪರವಾಗಿರುವವರ ವಾದ.
ಸುಬ್ರಹ್ಮಣ್ಯ ದೇವಾಲಯಕ್ಕೂ ನರಸಿಂಹ ಮಠಕ್ಕೂ ಸಂಬಂಧವಿಲ್ಲ
ಆದರೆ, ದೇವಾಲಯದ ಆಡಳಿತ ಮಂಡಳಿಯವರ ಹೇಳಿಕೆಯೇ ಬೇರೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೂ ಮತ್ತು ಸಂಪುಟ ನರಸಿಂಹ ಮಠಕ್ಕೂ ಸಂಬಂಧವಿಲ್ಲ. ದೇವಾಲಯಕ್ಕೆ ಇರುವ ಕೋಟ್ಯಂತರ ರೂಪಾಯಿ ಆದಾಯದ ಮೇಲೆ ಮೇಲೆ ಸ್ವಾಮೀಜಿ ಕಣ್ಣಿದ್ದು, ಅದನ್ನು ಕಬಳಿಸಲು ದೇವಾಲಯ ಬಗ್ಗೆ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಅರೋಪಿಸಲಾಗುತ್ತಿದೆ. ಅದಲ್ಲದೇ ಸರ್ಪ ಸಂಸ್ಕಾರ ಸಂಬಂಧಿಸಿದ ಕಾರ್ಯಗಳನ್ನು ಕೇವಲ ದೇವಸ್ಥಾನ ಮಾತ್ರವಲ್ಲ, ಮಠದಲ್ಲಿ ಮಾಡುವ ಪ್ರತೀತಿ ಇದೆ. ಮಠದಲ್ಲಿಯೂ ಮಾಡಬಹುದು ಎಂದು ಹೇಳಿ ಜನರಿಗೆ ಮೋಸ ಮಾಡಲಾಗುತ್ತಿದೆ. ಜನರನ್ನು ಮಠದವರು ಲೂಟಿ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ದೇವಸ್ಥಾನದಲ್ಲಿ 400 ರುಪಾಯಿಗೆ ಸರ್ಪಸಂಸ್ಕಾರ ಸೇವೆ ನೆರವೇರಿಸಲಾಗುತ್ತದೆ. ಅದರೆ ಮಠದಲ್ಲಿ 6 ಸಾವಿರ ರುಪಾಯಿ ವರೆಗೆ ವಸೂಲಿ ಮಾಡುತ್ತಾರೆ ಎಂದು ಆರೋಪಿಸುತ್ತಾರೆ. ದೇವಸ್ಥಾನದ ರಶೀದಿ ಪಡೆಯದೆ, ದೇವಸ್ಥಾನದ ವತಿಯಿಂದ ನಡೆಸದ, ಇತರ ಖಾಸಗಿ ಮಠ ಮಂದಿರಗಳಲ್ಲಿ ಅಥವಾ ನದೀ ತೀರದಲ್ಲಿ ನಡೆಸುವ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸುಬ್ರಹ್ಮಣ್ಯ ದೇವರಿಗೆ ಸಲ್ಲುವುದಿಲ್ಲ. ಭಕ್ತರು ಇಂತಹವರನ್ನು ಆಶ್ರಯಿಸಿ ಮೋಸ ಹೋಗಬಾರದು ಎಂದು ಇತ್ತೀಚೆಗೆ ದೇವಾಲಯ ವತಿಯಿಂದ ಪತ್ರಿಕಾ ಹೇಳಿಕೆ ಕೂಡ ಹೊರಡಿಸಲಾಗಿದೆ.
ಸರ್ಪ ಸಂಸ್ಕಾರವನ್ನು ಸಾಮೂಹಿಕವಾಗಿ ಮಾಡಬಾರದು
ಆದರೆ, ದೇವಾಲಯ ವಾದವನ್ನು ಮಠದವರು ತಿರಸ್ಕರಿಸಿದ್ದು, ಸರ್ಪ ಸಂಸ್ಕಾರ ಎನ್ನುವುದು ಸಾಮೂಹಿಕವಾಗಿ ಮಾಡುವ ಧಾರ್ಮಿಕ ಕ್ರಿಯೆ ಅಲ್ಲ. ಅದು ಪ್ರಾಯಶ್ಚಿತ್ತಕ್ಕಾಗಿ ವ್ಯಕ್ತಿಗತವಾಗಿ ಮಾಡುವ ಕಾರ್ಯಕ್ರಮ. ಸಾಮೂಹಿಕವಾಗಿ ಸರ್ಪಸಂಸ್ಕಾರಕ್ಕೆ ಶಾಸ್ತ್ರಗಳಲ್ಲೂ ಸಹಮತ ಇಲ್ಲ. ಕುಕ್ಕೆ ಕ್ಷೇತ್ರದ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸಬೇಕಾದ ಸೇವೆಗಳಾದ ರಥೋತ್ಸವ, ಡೋಲೋತ್ಸವ, ತುಲಾಭಾರ ಇತ್ಯಾದಿಗಳನ್ನು ದೇವಸ್ಥಾನದ ಮೂಲಕವೇ ಮಾಡಿಸಬೇಕು. ಆದರೆ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ವೈಯಕ್ತಿಕ ನೆಲೆಯ ಪ್ರಾಯಶ್ಚಿತ ಹಾಗೂ ಸೇವೆಗಳನ್ನು ಯಾರೂ- ಎಲ್ಲೂ ಮಾಡಿಸಬಹುದು ಎಂಬುವುದು ಮಠದವರ ವಾದ. ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ವಾದ- ವಿವಾದದಲ್ಲಿ ಈಗ ರಾಜಕೀಯ ಕೂಡ ಪ್ರವೇಶಿಸಿದ್ದು, ಸಮಸ್ಯೆ ಮತ್ತಷ್ಠು ಜಟಿಲವಾಗುತ್ತಾ ಸಾಗಿದೆ. ಆದರೆ ಮಠ ಹಾಗೂ ದೇವಾಲಯ ನಡುವಿನ ಹಗ್ಗ ಜಗ್ಗಾಟದಲ್ಲಿ ದೇವರಿಗೆ ಸೇವೆ ಸಲ್ಲಿಸಲು ಹಾಗೂ ಪ್ರಾಯಶ್ಚಿತ ಹುಡುಕಿ ಬರುವ ಭಕ್ತರು ಮಾತ್ರ ಗೊಂದಲದಲ್ಲಿಯೇ ಇದ್ದಾರೆ.