ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಎಂದು ಕಾಂಗ್ರೆಸ್ ನಾಯಕಿ ಎಡವಟ್ಟು
ಮಂಗಳೂರು, ಏಪ್ರಿಲ್ 16 : ಜಮ್ಮು- ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಖಂಡಿಸಿ, ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಆದರೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿಯೊಬ್ಬರು ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಘಟನೆ ಖಂಡಿಸಿ ಮಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಭಾನುವಾರ ಸಂಜೆ ಪ್ರತಿಭಟನೆ ಆಯೋಜಿನಲಾಗಿತ್ತು. ನಗರದ ಲಾಲ್ ಬಾಗ್ ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸೇರಿದ ಕಾಂಗ್ರೆಸ್ ಕಾರ್ಯಕರ್ತೆಯರು ಘಟನೆ ಖಂಡಿಸಿ, ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ಕತುವಾ ಅತ್ಯಾಚಾರ ಪ್ರಕರಣ: ಕಣ್ಣಲ್ಲಿ ಕಣ್ಣಿಟ್ಟು ಸತ್ಯ ಹೇಳಲು ಕೇಳುವೆ
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ದೇಶದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಆತಂಕದಲ್ಲಿ ಬದುಕುವಂತಹ ಪರಿಸ್ಥತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೇನಾ ಅಚ್ಛೇ ದಿನ್? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಅತ್ಯಾಚಾರ ಘಟನೆ ವಿರುದ್ಧ ದೇಶದಲ್ಲಿ ಮಹಿಳೆಯರು ಒಂದಾಗಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು .
ಕೇಂದ್ರ ಸರಕಾರದ ವಿರುದ್ದ ಮಾತನಾಡುವ ಭರದಲ್ಲಿ ಶಾಲೆಟ್ ಪಿಂಟೋ, ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದರು. "ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ", "ಅವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ", ಇದಕ್ಕೆ "ಎಲ್ಲಾ ಮಹಿಳೆಯರು ಧ್ವನಿಯಾಗಬೇಕು" ಎಂದು ಹೇಳಕೆ ನೀಡಿದರು.
ಕತುವಾ ಅತ್ಯಾಚಾರ ಖಂಡಿಸಿ ದೇಶ್ಯಾದ್ಯಂತ ತೀವ್ರಗೊಂಡ ಹೋರಾಟ:ಚಿತ್ರಗಳು
ಶಾಲೆಟ್ ಪಿಂಟೋ ಅವರ ಈ ಹೇಳಿಕೆ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿವೆ.