ಮುಲ್ಕಿ ಮೂಡಬಿದ್ರೆ ಟಿಕೆಟ್ಗಾಗಿ ಐವನ್ ಡಿಸೋಜಾ ಅವಿರತ ಹೋರಾಟ
ಮಂಗಳೂರು, ಏಪ್ರಿಲ್ 13 : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಅತ್ಯಂತ ಜಿದ್ದಾ ಜಿದ್ದು ಕೆರಳಿಸಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ನೇರ ಸ್ಪರ್ಧೆ ಇರುವುದು ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಅಲ್ಲ. ಬದಲಾಗಿ ನೇರ ಸ್ಪರ್ಧೆ ಇರುವುದು ಕಾಂಗ್ರೆಸ್ ಟಿಕೆಟ್ಗಾಗಿ.
ಸಿಎಂ ಸಮ್ಮುಖದಲ್ಲೇ ಅಭಯಚಂದ್ರ ಜೈನ್ - ಐವನ್ ಡಿಸೋಜಾ ಜಟಾಪಟಿ
ಒಂದೆಡೆ ಶಾಸಕ ಅಭಯಚಂದ್ರ ಜೈನ್ ಅವರಿಗೆ ಈಗಾಗಲೇ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಟಿಕೆಟ್ ಗಿಟ್ಟಿಸಿಕೊಳ್ಳಲು ನಿರ್ಣಾಯಕ ಕೊನೆಯ ಹಂತದ ಹೋರಾಟ ನಡೆಸಿದ್ದಾರೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಐವನ್ ಟಿಕೆಟ್ಗಾಗಿ ಸರ್ವ ರೀತಿಯ ಲಾಬಿಗಳನ್ನು ನಡೆಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಈ ಹಿಂದೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದಿಂದ ಯುವಕರಿಗೆ ಟಿಕೆಟ್ ನೀಡಿದರೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಶಾಸಕ ಅಭಯಚಂದ್ರ ಜೈನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದರು. ಕ್ಷೇತ್ರದಲ್ಲಿ ನಡೆದ ಎಲ್ಲಾ ಸಣ್ಣಪುಟ್ಟ ಕಾರ್ಯಕ್ರಮ, ಕೋಲ, ನೇಮ, ಕೋಳಿ ಅಂಕ ಸೇರಿದಂತೆ ಬ್ರಹ್ಮಕಲಶ, ಚರ್ಚ್ಗಳ ವಾರ್ಷಿಕೋತ್ಸವ, ಉರುಸ್, ಸತ್ಯನಾರಾಯಣ ಪೂಜೆಯವರೆಗೆ ಎಲ್ಲ ಕಾರ್ಯಕ್ರಮಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ಷೇತ್ರದ ಮುಂದಿನ ಅಭ್ಯರ್ಥಿ ತಾನೇ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದರು.
ಆದರೆ ಕರಾವಳಿಯಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ರಿಸ್ಕ್ ತೆಗೆದುಕೊಳ್ಳದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿ ಅನುಭವಿಗೆ ಟಿಕೆಟ್ ಕೊಡಲು ಆಸಕ್ತಿ ತೋರಿದ ಕಾರಣ, ಅಭಯಚಂದ್ರ ಜೈನ್ ಅವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಚಿಗುರೊಡೆಯಿತು.
ಶಾಸಕ ಅಭಯಚಂದ್ರ ಜೈನ್ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಕಾರಣ, ಮುಲ್ಕಿ ಮೂಡಬಿದ್ರೆ ಕ್ಷೇತ್ರ ದಲ್ಲಿ ಈವರೆಗೆ ಮಾಡಿದ್ದೆಲ್ಲ ನೀರಿನಲ್ಲಿ ಮಾಡಿದ ಹೋಮ ಎಂದು ತಿಳಿದ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಟಿಕೆಟ್ ಸ್ಪರ್ಧೆಯಿಂದ ಹಿಂದೆ ಸರಿದರು. ಆದರೆ ಐವನ್ ಡಿಸೋಜಾ ಮಾತ್ರ ಜಿದ್ದಾ ಜಿದ್ದಿಗೆ ಬಿದ್ದು ಟಿಕೆಟ್ಗಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಕ್ಷೇತ್ರ ಪರಿಚಯ: ಬಿಜೆಪಿಗೆ ಒಲಿಯದ ಕಾಂಗ್ರೆಸ್ ಭದ್ರಕೋಟೆ ಮೂಡಬಿದಿರೆ
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಪ್ರಬಲ ಆಕಾಂಕ್ಷಿಗಳ ಪಟ್ಟಿ ರಚಿಸಲಾಗಿತ್ತು. ಈ ಪಟ್ಟಿಯಲ್ಲಿ ಹೆಸರು ಸೇರಿಸುವಲ್ಲಿ ಐವಾನ್ ಡಿಸೋಜ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ. ಟಿಕೆಟ್ಗಾಗಿ ಐವನ್ ಡಿಸೋಜಾ ಮುಲ್ಕಿ ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯ ಕ್ರೈಸ್ತ ಧಾರ್ಮಿಕ ಮುಖಂಡರು ಸೇರಿದಂತೆ ಕ್ರೈಸ್ತ ಸಮುದಾಯದ ಮುಖಂಡರ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಇದೆ.
ಈ ನಡುವೆ ಕರಾವಳಿಯ ಕ್ರೈಸ್ತ ಸಮುದಾಯದ ಪ್ರಬಲ ನಾಯಕರೊಬ್ಬರ ವಿಶ್ವಾಸ ಗಳಿಸುವಲ್ಲಿ ಐವನ್ ಸಫಲರಾಗಿದ್ದು ಅವರನ್ನು ಟಿಕೆಟ್ ಗಾಗಿ ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ.