ಮಂಗಳೂರು: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ
ಮಂಗಳೂರು, ಮೇ 20: ಬಿಜೆಪಿಯ ಮೂರು ದಿನದ ಸರ್ಕಾರ ಪಥನವಾಗಿ ಕಾಂಗ್ರೆಸ್-ಜೆಡಿಎಸ್ ಜಂಟಿ ಸರಕಾರ ಕಸರತ್ತು ಆರಂಭವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಸುತ್ತಮುತ್ತ ಪ್ರದೇಶಗಳಲ್ಲಿ ಘರ್ಷಣೆ ಆರಂಭವಾಗಿದೆ.ವಿಟ್ಲದ ಕೆಲಿಂಜದಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಸಂಭಂದಿಸಿದೆ.
ಕೆಲಿಂಜದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತ ಬಿಜೆಪಿಗೆ ಮುರ್ದಾಬಾದ್ ಎಂದು ಘೋಷಣೆ ಕೂಗಿದಾಗ ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸ್ಗೆ ಮುರ್ದಾಬಾದ್ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ಆರಂಭವಾಗಿದೆ. ಬಳಿಕ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ ದೊಣ್ಣೆ, ಸೋಡಾಬಾಟ್ಲಿಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಲೋಕಸಭೆ ಮಹಾಒಕ್ಕೂಟಕ್ಕೆ ಮುನ್ನಡಿಯೇ?
ನಂತರ ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿಯೂ ಗುಂಪು ಘರ್ಷಣೆ ಸಂಭವಿಸಿದೆ. ಕೇರಳ ಕರ್ನಾಟಕ ಗಡಿಭಾಗದಲ್ಲಿ ಕೇರಳದ ಒಂದು ಕೋಮಿನ ಯುವಕರ ತಂಡ ಕನ್ಯಾನ ಪೇಟೆಯಲ್ಲಿ ನೂತನ ಸರ್ಕಾರದ ರಚನೆಯ ಸಂಭ್ರಮಾಚರಣೆ ನಡೆಸಿದ್ದು ಅಲ್ಲಿಯೂ ಘರ್ಷಣೆ ಸಂಭವಿಸಿದೆ.
ಈ ನಡುವೆ ಬಿಜೆಪಿ ಮುಖಂಡರ ಮನೆಗೆ ನುಗ್ಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಟ್ಲ ಪರಿಸರದಲ್ಲಿ ಬಿಗುವಿನ ವಾತವರಣ ನಿರ್ಮಾಣವಾದ ಕಾರಣ ರಸ್ತೆ ಬದಿಯಲ್ಲಿದ್ದವರಿಗೂ ಪೊಲೀಸರು ಲಾಠಿ ಬೀಸಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಬೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.