ಕಲ್ಲಡ್ಕ ಪ್ರಭಾಕರ ಭಟ್ ಗೆ ಮತ್ತೊಂದು ಸಂಕಷ್ಟ, ಜಾತಿ ನಿಂದನೆ ದೂರು ದಾಖಲು
ಮಂಗಳೂರು, ಏಪ್ರಿಲ್ 11: ದೈವಸ್ಥಾನ ಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವ ಯು. ಟಿ. ಖಾದರ್ ಗೆ ಪ್ರಸಾದ ನೀಡಿದ ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಎಂಬ ಹೇಳಿಕೆಗೆ ನೀಡಿದ್ದ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಒಂದರ ಮೇಲೊಂದು ಸಂಕಷ್ಟ ಎದುರಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ನಲಿಕೆ ಸಮುದಾಯ ಡಾ. ಪ್ರಭಾಕರ ಭಟ್ ಅವರ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.
ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ತಿರುಗಿ ಬಿದ್ದಿರುವ ನಲಿಕೆ ಸಮುದಾಯ ಜಾತಿ ನಿಂದನೆ ದೂರು ದಾಖಲಿಸಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಲಿಕೆ ಸೇವಾ ಸಂಘದ ವತಿಯಿಂದ ಡಾ. ಪ್ರಭಾಕರ ಭಟ್ ವಿರುದ್ದ ದೂರು ನೀಡಲಾಗಿದೆ. ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ ಎಸ್. ಪ್ರಭಾಕರ ಶಾಂತಿಕೋಡು ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
'ಖಾದರ್ ಪ್ರವೇಶಿಸಿದ ದೇವಾಲಯಕ್ಕೆ ಮತ್ತೊಮ್ಮೆ ಬ್ರಹ್ಮ ಕಲಶ ಆಗಲೇಬೇಕು'
ಸಚಿವ ಯು.ಟಿ ಖಾದರ್ ಪ್ರವೇಶಿಸಿದ ದೇವಾಲಯ ಹಾಗು ದೈವಸ್ಥಾನ ಗಳಲ್ಲಿ ಇನ್ನೋಮ್ಮೆ ಬ್ರಹ್ಮಕಲಶ ನಡೆಸಬೇಕು ಎಂದು ಹೇಳಿಕೆ ನೀಡಿದ್ದ ಆರ್.ಎಸ್.ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಾಂಗ್ರೆಸ್ ಚುನಾವಣಾ ಅಧಿಕಾರಿಗಳಿಗೆ ಈ ಹಿಂದೆ ದೂರು ನೀಡಿತ್ತು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಈ ನಡುವೆ ಡಾ. ಕಲ್ಲಡ್ಕ ಪ್ರಭಾಕರ ಭಟ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕು. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಹರೀಶ್ ಕುಮಾರ್ ಒತ್ತಾಯಿಸಿದ್ದರು.