ಚುನಾವಣಾ ಪ್ರಚಾರಕ್ಕೆ ಅಯ್ಯಪ್ಪ ಸ್ತುತಿ, ಶಾಸಕ ಬಾವಾ ವಿರುದ್ಧ ದೂರು
ಮಂಗಳೂರು, ಮಾರ್ಚ್ 10: ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಯ ರಾಗವನ್ನು ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿಕೊಂಡಿರುವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಇದೀಗ ಶಾಸಕ ಮೊಯ್ದೀನ್ ಬಾವ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾಸಕ ಮೊಯ್ದೀನ್ ಬಾವಾ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಹಾಗೂ ಹಿಂದೂ ದೇವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಚುನಾವಣೆ ಸಂದರ್ಭದಲ್ಲಿ ಶಾಸಕ ಮೊಯ್ದೀನ್ ಬಾವಾ ಅಯ್ಯಪ್ಪ ಸ್ವಾಮಿ ಸ್ತುತಿಯನ್ನು ದುರ್ಬಳಕೆ ಮಾಡಿಕೊಂಡು ಸೌಹಾರ್ದ ಕದಡಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಮೊಯ್ದೀನ್ ಬಾವಾ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಪುಣ್ಯಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸ್ವಾಮಿಯನ್ನು ಸ್ತುತಿಸುವ "ಕಲ್ಲು ಮುಳ್ಳು ಶಬರಿಮಲೆಕ್ಕ್" ಅನ್ನುವ ಭಕ್ತಿಗೀತೆಯನ್ನೇ ಹೋಲುವಂತೆ ಚುನಾವಣಾ ಪ್ರಚಾರದ ಪದ್ಯವನ್ನು ರಚಿಸಲಾಗಿತ್ತು.
ಅಯ್ಯಪ್ಪ ಸ್ವಾಮಿ ಸ್ತುತಿ ರಾಗದಲ್ಲಿ ಶಾಸಕ ಬಾವಾ 'ಭಜನೆ'
ಆದರೆ, ಹಾಡಿನಲ್ಲಿ ಅಯ್ಯಪ್ಪ ಸ್ವಾಮಿಯ ಬದಲಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾರನ್ನು ಹೊಗಳಿ ಸಾಹಿತ್ಯ ರಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಸಿದ್ಧ ಭಕ್ತಿಗೀತೆಯ ಧಾಟಿಯನ್ನು ರಾಜಕಾರಣಿಯನ್ನು ಹೊಗಳಲು ಬಳಸಿಕೊಂಡಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪದ್ಯ ವೈರಲ್ ಆಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಸಕ ಮೊಯ್ದೀನ್ ಬಾವಾ ಅವರ ವಿರುದ್ದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.