ಚಿತ್ತಾಕರ್ಷಕ ಗೂಡು ದೀಪ ಸ್ಪರ್ಧೆ ನೋಡಲು ಹರಿದುಬಂತು ಜನಸಾಗರ
ಮಂಗಳೂರು, ನವೆಂಬರ್. 05: ದೀಪಾವಳಿ ಎಂದರೆ ದೀಪಗಳ ಹಬ್ಬ. ಹಣತೆ ಹಚ್ಚುವ ಹಬ್ಬ.ಇಂದಿನಿಂದ ಬೆಳಕಿನ ಹಬ್ಬ ದೀಪಾವಳಿಯನ್ನು ಸ್ವಾಗತಿಸುವುದಕ್ಕಾಗಿ ಮನೆ ಮನೆಗಳಲ್ಲಿ ಸಂಭ್ರಮ ನೆಲೆಯಾಗಿದೆ.
ಕತ್ತಲಿನಿಂದ ಬೆಳಕಿನ ಕಡೆಗೆ ಎಂಬ ಸಂದೇಶ ಸಾರುವ ದೀಪಾವಳಿಗೆ ಭಾರತೀಯ ಪರಂಪರೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ. ಮನೆ ಮನೆಯಲ್ಲಿ ಬೆಳಕಿನ ಚಿತ್ತಾರ ಮೂಡಿಸಿ ಮನಸ್ಸಿನ ಜಾಢ್ಯ, ಅಂಧಕಾರಗಳನ್ನು ಹೊಡೆದೋಡಿಸಿ ಬೆಳಕನ್ನು ನೆಲೆಗೊಳಿಸಬೇಕೆಂಬುದು ಈ ಹಬ್ಬದ ಉದ್ದೇಶ.
ದೀಪಾವಳಿಯಂದು ಪ್ರತಿ ಮನೆಗಳಲ್ಲಿ ಇಡುವ ಗೂಡು ದೀಪಗಳನ್ನು ನೋಡುವುದೇ ಚೆಂದ. ಆದರೆ ಅಂಧಕಾರದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಈ ಗೂಡು ದೀಪಗಳ ಪರಂಪರೆ ಕ್ಷೀಣಿಸುತ್ತಿದೆ. ಅದಕ್ಕಾಗಿ ಈ ಕಾಲ ಘಟ್ಟದಲ್ಲಿ ಜನತೆಯನ್ನು ಮತ್ತೆ ಗೂಡುದೀಪಗಳತ್ತ ಆಕರ್ಷಿಸುವಂತೆ ಮಾಡುವ ಪ್ರಯತ್ನ ಮಂಗಳೂರಿನಲ್ಲಿ ಸದ್ದಿಲ್ಲದೆ ಸಾಗಿದೆ.
ಅನ್ಯರಿಗೂ ಜ್ಞಾನದೀಪ ದಾನ ಮಾಡಿ ದೀಪಾವಳಿ ಆಚರಿಸೋಣ...
ಕಳೆದ 19 ವರ್ಷಗಳಿಂದ ಗೂಡು ದೀಪಗಳನ್ನು ರಚಿಸುವ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಏರ್ಪಡಿಸಲಾಗುತ್ತಿದೆ. ಪ್ರತಿವರ್ಷ ಮಂಗಳೂರಿನಲ್ಲಿ ಈ ಗೂಡು ದೀಪ ಸ್ಪರ್ಧೆ ನಡೆಯುತ್ತಿದ್ದು , ಪಾರಂಪರಿಕ , ಆಧುನಿಕ ಸೇರಿದಂತೆ 3 ವಿಭಾಗಗಳಲ್ಲಿ ಈ ಗೂಡು ದೀಪ ರಚಿಸುವ ಸ್ಪರ್ಧೆ ಆಯೋಜಿಸಲಾಗುತ್ತದೆ.
'ನಮ್ಮ ಕುಡ್ಲ ಸಂಸ್ಥೆ'ಯಿಂದ ಆಯೋಜನೆ
ಈ ದೀಪಾವಳಿಯ ಸಂಭ್ರಮದ ಪ್ರತೀಕವೇ ಈ ಗೂಡು ದೀಪಗಳು ಅಥವಾ ಆಕಾಶ ಬುಟ್ಟಿಗಳು. ಇದನ್ನು 'ವ್ಯೊಮ ದ್ವೀಪ' ಎಂದು ಕರೆಯಲಾಗುತ್ತದೆ. ಕಗ್ಗತ್ತಲ ರಾತ್ರಿಯಲ್ಲಿ ಬಣ್ಣ ಬಣ್ಣದ ಬೆಳಕಿನ ಚಿತ್ತಾರ ಮೂಡಿಸುವ ಗೂಡು ದೀಪಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಹಿಂದೆ ಪ್ರತಿ ಮನೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಈ ಗೂಡು ದೀಪಗಳನ್ನು ರಚಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಜಾಗತೀಕರಣದ ಭರಾಟೆಯಲ್ಲಿ ರೆಡಿಮೇಡ್ ಗೂಡು ದೀಪಗಳು ಮಾರುಕಟ್ಟೆ ಪ್ರವೇಶಿಸಿವೆ.
ಈ ಹಿನ್ನೆಲೆಯಲ್ಲಿ ಸಾಂಪ್ರಾದಾಯಿಕ ಸೊಗಡನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಗೂಡು ದೀಪ ರಚಿಸುವ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಮಂಗಳೂರಿನ ನಮ್ಮಕುಡ್ಲ ಸಂಸ್ಥೆ ಕಳೆದ 19 ವರ್ಷಗಳಿಂದ ಈ ಸ್ಪರ್ಧೆ ಏರ್ಪಡಿಸಿ ಕೊಂಡುಬಂದಿದೆ. ಈ ಬಾರಿಯಂತೂ 840ಕ್ಕೂ ಅಧಿಕ ಗೂಡು ದೀಪಗಳು ಈ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದವು.
ಕಾಫಿನಾಡಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುವ ದೇವಿರಮ್ಮನ ಜಾತ್ರೆಗೆ ಕ್ಷಣಗಣನೆ
ಆಧುನಿಕ ಶೈಲಿಯ ಗೂಡು ದೀಪಗಳು
ಪ್ರತಿವರ್ಷ ಮಂಗಳೂರಿನ ಶ್ರೀ ಕ್ಷೇತ್ರ ಗೋಕರ್ಣನಾಥೇಶ್ವರ ದೇವಾಲಯ ಆವರಣದಲ್ಲಿ ಈ ಗೂಡು ದೀಪ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಅಂತೆಯೇ ಈ ವರ್ಷವೂ ನವೆಂಬರ್ 04, ಭಾನುವಾರದಂದು ಸಂಜೆ ಈ ಸ್ಪರ್ಧೆ ಶ್ರೀ ಕ್ಷೇತ್ರದ ಆವರಣದಲ್ಲಿ ನಡೆಯಿತು.
ಸಾಂಪ್ರದಾಯಿಕ, ಆಧುನಿಕ ಶೈಲಿ, ಮಾಗರಿ ಎಂಬ ಮೂರು ವಿಭಾಗಗಳಲ್ಲಿ ಗೂಡು ದೀಪಗಳು ಪ್ರದರ್ಶಿತವಾಗಿದ್ದವು. ಸಾಂಪ್ರಾದಾಯಿಕ ವಿಭಾಗದಲ್ಲಿ ಧಾನ್ಯ ಕಾಳುಗಳು, ತರಕಾರಿ, ಸೆಗಣಿ, ಲೋಹದ ಬೋಲ್ಟ್ ,ಭತ್ತ, ಹುಲ್ಲು, ರಬ್ಬರ್ ಬ್ಯಾಂಡ್ , ಕ್ರಯಾನ್ ,ಸೋಯಾಬೀನ್, ಹರಳು, ಬಳೆ, ಬಿದಿರು, ಕಸೂತಿ ಕಲೆಯ ವೈಶಿಷ್ಟ್ಯಗಳನ್ನೊಳಗೊಂಡ ವಿಶಿಷ್ಟ ಗೂಡು ದೀಪಗಳು ಪ್ರದರ್ಶನಗೊಂಡರೆ, ಆಧುನಿಕ ಶೈಲಿಯ ಗೂಡು ದೀಪಗಳಲ್ಲಿ ಚಿಪ್ಪು, ಬೆಂಕಿಕಡ್ಡಿ, ಪೇಪರ್ ಲೋಟಾ , ಟೂತ್ ಪಿಕ್, ತಂಪು ಪಾನಿಯಗಳ ಕ್ಯಾಪ್, ಹಿಡಿಕಡ್ಡಿ, ನಾಣ್ಯಗಳನ್ನು ಬಳಸಿ ರೂಪಿಸಿದ ಗೂಡುದೀಪಗಳು ಪ್ರದರ್ಶನಗೊಂಡಿದ್ದವು .
ಗೋವಿನ ಸಗಣಿಯಿಂದ ರಚಿಸಿದ ಗೂಡುದೀಪ
ಸ್ಪರ್ಧೆಯಲ್ಲಿ 38 ಸಾವಿರ ಲೋಹದ ಬೋಲ್ಟ್ ಗಳನ್ನು ಬಳಸಿ ರಚಿಸಿದ್ದ ಗೂಡು ದೀಪ ಜನರನ್ನು ಆಕರ್ಷಿಸಿತು. ತೊಕ್ಕೊಟ್ಟಿನ ನಿತ್ಯಾನಂದ ಯುವಕ ಮಂಡಲದ 5 ಜನರ ಪರಿಶ್ರಮದಿಂದ ಈ 47 ಕೆಜಿ ಭಾರದ ಗೂಡುದೀಪ ರಚಿಸಲಾಗಿದೆ.
ಈ ನಡುವೆ ಗೋವಿನ ಸಗಣಿಯಿಂದ ರಚಿಸಿದ ಗೂಡುದೀಪ ಹೊಸತನದಿಂದ ಆಕರ್ಷಿಸಿತು. ನಗರದ ಅಣ್ಣ-ತಂಗಿ ಇಬ್ಬರೂ ಸೇರಿ ಮಕ್ಕಳು ಚಿತ್ರ ಬಿಡಿಸಲು ಬಳಸುವ ಕ್ರೆಯಾನ್ ಗಳನ್ನು ಬಳಸಿ ನಿರ್ಮಿಸಿದ ಗೂಡದೀಪ, ಯುವತಿಯರು ಜಡೆ ಕಟ್ಟಲು ಬಳಸುವ 2,367 ರಬ್ಬರ್ ಬ್ಯಾಂಡ್ ಹಾಗೂ ಪ್ಲಾಸ್ಟಿಕ್ ಚಮಚಗಳನ್ನು ಬಳಸಿ ರಚಿಸಿದ ಗೂಡು ದೀಪ ಹೆಚ್ಚು ಜನರನ್ನು ಆಕರ್ಷಿಸಿದವು.
ಸಾವಿರಾರು ಸಂಖ್ಯೆಯಲ್ಲಿ ಬಂದ ಜನರು
ಗಡಿಯಾರ, ದೇವಾಲಯಗಳು, ಪಾರಂಪರಿಕ ಕಟ್ಟಡಗಳ ವಿಶಿಷ್ಟವಾದ ಕಲಾಕೃತಿಗಳು ನೋಡುಗರ ಮನ ತಣಿಸಿದವು. ಈ ಸುಂದರ ಗೂಡುದೀಪಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಲು ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು.
ಜಾಗತೀಕರಣ ಮತ್ತು ವಿದೇಶಿ ಸಂಸ್ಕೃತಿಯ ದಾಳಿಯ ನಡುವೆ ಸಾಂಪ್ರಾದಾಯಿಕ ಮತ್ತು ಜನಪದೀಯ ಕಲೆ ಮತ್ತು ಸಂಸ್ಕೃತಿ ಮೂಲೆಗುಂಪಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಅಲ್ಪ ಪ್ರಮಾಣದಲ್ಲಿ ಆದರೂ ಜನರನ್ನು ಮೂಲ ಸಂಸ್ಕೃತಿಯೆಡೆಗೆ ಸೆಳೆಯುವಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಯಶಸ್ವಿಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.