ಮಂಗಳೂರಿನಲ್ಲಿ ಮತ್ತೆ ಮೊಳಗಿದ ಕಂಬಳದ ಕಹಳೆ
ಮಂಗಳೂರು, ಡಿಸೆಂಬರ್ 04 : ನಿಷೇಧ, ಕೋರ್ಟ್ ಜಟಾಪಟಿ ಬಳಿಕ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಹೊಸ ಕಳೆ ಬಂದಿದೆ. ಹಿಂದಿಗಿಂತ ಹೆಚ್ಚು ಉತ್ಸಾಹದಲ್ಲಿ ಕ್ರೀಡೆಯಲ್ಲಿ ಜನ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಕಂಬಳ ಈಗ ನಗರ ಪ್ರದೇಶಕ್ಕೂ ಕಾಲಿಟ್ಟಿದೆ.ಕಂಬಳಕ್ಕೂ ಹೈಟೆಕ್ ಟಚ್ ನೀಡಲಾಗಿದ್ದು ಸಿಟಿಯಲ್ಲೇ ಗ್ರಾಮೀಣ ಕ್ರೀಡೆಗೆ ಚಾಲನೆದೊರೆತಿದ್ದು, ನಗರದಲ್ಲಿ ಮತ್ತೆ ಕೊಣಗಳ ಗತ್ತು ಆರಂಭವಾಗಿದೆ.
ಮಂಗಳೂರಿನ ನಗರ ಮಧ್ಯೆ ಅಪ್ಪಟ ಜನಪದ ಕ್ರೀಡೆ ಕಂಬಳ ನಿನ್ನೆ ಬಾನುವಾರ ಆಯೋಜನೆಗೊಂಡಿತ್ತು. ಕೋಣಗಳ ಬಿರುಸಿನ ಓಟದ ಕ್ರೀಡೆ ಕಂಬಳ. ನಿಷೇಧದ ಹಿನ್ನೆಲೆಯಲ್ಲಿ ಕಳೆದ ವರ್ಷ ಕರಾವಳಿಯಲ್ಲಿ ಕಂಬಳ ಆಯೋಜನೆ ಗೊಂಡಿರಲಿಲ್ಲ. ನಿಷೇಧದ ತೂಗುಗತ್ತಿಯಡಿ ಓಲಾಡುತ್ತಿದ್ದ ಕಂಬಳ ಈಗ ನಗರದಲ್ಲೂ ವಿಜೃಂಭಿಸತೊಡಗಿದೆ. ಮಂಗಳೂರಿನ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಒಳಗೆ ಕೃತಕವಾಗಿ ರೂಪಿಸಿದ ರಾಮ ಲಕ್ಷ್ಮಣ ಜೋಡುಕೆರೆ ಕಂಬಳದ ಕರೆಯಲ್ಲಿ ಓಟದ ಕೋಣಗಳು ಜನರಲ್ಲಿ ಆಟದ ರಂಗನ್ನು ಮೂಡಿಸಿದ್ದವು.
ಸಾಮಾನ್ಯವಾಗಿ ಕಂಬಳ ಹಳ್ಳಿಗಳಲ್ಲಿ ಮಾತ್ರ ಎನ್ನುವಂತಿದ್ದವು. ಆದರೆ ಈದೇ ಮೊದಲ ಬಾರಿಗೆ ನಗರದ ಮಧ್ಯೆ ಹಳ್ಳಿ ಸೃಷ್ಟಿಯಾಗಿತ್ತು. ಮಣ್ಣಿನ ಆಟವನ್ನು ನೋಡಿ ಸಿಟಿಜನ ಸಂಭ್ರಮ ಪಟ್ಟರು. ಈ ಹಿಂದೆ ಮಂಗಳೂರಿನ ಹೃದಯಭಾಗದ ಕದ್ರಿಯಲ್ಲಿ ಕದ್ರಿ ಕಂಬಳ ಆಯೋಜಿಸಲಾಗುತ್ತಿತ್ತು. ಆದರೆ ಕೆಲವು ಕಾರಣಗಳಿಂದ ಇದು ನಿಂತುಹೋಯಿತು .ಆದರೆ ನಗರದಲ್ಲೀಗ ಮತ್ತೆ ಕಂಬಳಗಳು ಆರಂಭಗೊಂಡಿದೆ. ಕೋಣಗಳ ಗತ್ತು ಮತ್ತೆ ನಗರದಲ್ಲಿ ವಿಜೃಂಭಿಸ ತೊಡಗಿದೆ.
ಇನ್ನು ಈ ರಾಮ ಲಕ್ಷ್ಮಣ ಕಂಬಳ ವೀಕ್ಷಿಸಲು ಪಶು ಸಂಗೋಪನೆ ಸಚಿವ ಆರ್. ಮಂಜು ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ಸಚಿವರು, ಕಂಬಳದ ಕುರಿತ ಪೇಟಾ ಅರ್ಜಿ ಡಿ.11 ರಂದು ಸುಪ್ರೀಂ ಕೋರ್ಟಿನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ. ಆದರೆ ಕಂಬಳದಲ್ಲಿ ಹಿಂಸೆ ನಡೆಯಲ್ಲ ಅನ್ನುವುದನ್ನು ಕೋರ್ಟಿಗೆ ಮನವರಿಕೆ ಮಾಡಲಿದ್ದೇವೆ ಅಂತಾ ಹೇಳಿದರುಮ
ಇದಲ್ಲದೆ, ಮಂಗಳೂರಿನಂಥ ನಗರ ಪ್ರದೇಶದಲ್ಲಿ ಕೆಲವು ವರ್ಷದ ಬಳಿಕ ಮೊದಲ ಬಾರಿಗೆ ಕಂಬಳ ಆಯೋಜಿಸಿದ್ದರಿಂದ ನೋಡಲು ಬಂದವರೂ ಖುಷಿಯಾಗಿದ್ದರು. ಒಟ್ಟಿನಲ್ಲಿ ನಿಷೇಧದ ತೂಗುಗತ್ತಿಯಡಿ ಮರೆಯಾಗುತ್ತಿದ್ದ ಕಂಬಳ ಈಗ ನಗರ ಪ್ರದೇಶದ ಜನರನ್ನೂ ಆಕರ್ಷಿಸುತ್ತಿದೆ.