2017 ಬಜೆಟ್ : ಸಾಲ ಮನ್ನಾ ಇಲ್ಲ, ಕರಾವಳಿ ರೈತರು ಏನಂದ್ರು?
ಮಂಗಳೂರು, ಮಾರ್ಚ್. 15 : ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಿ ರೈತರ ಬಾಳಿಗೆ ಬೆಳಕಾಗಲಿದ್ದಾರೆ ಎಂಬ ರೈತರ ಆಸೆಗೆ ತಣ್ಣೀರೆರಚಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡದೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಅಲ್ಪಾವಧಿ ಕೃಷಿ ಸಾಲ ನೀಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಇದರಿಂದ ರೈತರಿಗೆ ಬೇಸರವನ್ನುಂಟು ಮಾಡಿದೆ. ಈ ಬಗ್ಗೆ ರೈತರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
'ಈ ಸಲದ ಬಜೆಟ್ ನಲ್ಲಿ ನಮ್ಮ ಸಾಲ ಮನ್ನಾ ಮಾಡುತ್ತಾರೆ. ನಮ್ಮ ಜೀವ ಕಾಪಾಡುತ್ತಾರೆ ಅಂದುಕೊಂಡಿದ್ದೀವಿ. ಆದರೆ, ಸಾಲ ಮಾಡದೇ ಸಾಲ ನೀಡುತ್ತೇವೆ ಎಂದು ಹೇಳಿದ್ದಾರೆ ಸಿಎಂ. ಮಾಡಿರುವ ಸಾಲ ಹೇಗೆ ತೀರಿಸುವುದು ಹೇಗೆ ಅನ್ನೋದೇ ಚಿಂತೆಯಾಗಿಬಿಟ್ಟಿದೆ. - ವೆಂಕಪ್ಪ,ಸಜೀಪ ರೈತ.
ರಾಜ್ಯ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದ,ರೆ ಸಿದ್ದರಾಮಯ್ಯ ರೈತಾಪಿ ವರ್ಗಕ್ಕೆ ಚೊಂಬು ನೀಡಿದಂತಾಗಿದೆ. ರೈತರ ಬಗ್ಗೆ ಈ ರೀತಿಯ ಅಸಡ್ಡೆ ಸಲ್ಲದು. -ಫೆಡ್ರಿಕ್, ಮೇರ್ಲಪದವು
ರಾಜ್ಯದ 143 ತಾಲೂಕುಗಳಲ್ಲಿ ಜಲಕ್ಷಾಮ ಆವರಿಸಿದೆ. ಇದೇ ಬೆನ್ನಲ್ಲೇ ಇನ್ನು ಹೊಸ ತಾಲೂಕುಗಳನ್ನ ಘೋಷಿಸಿರುವುದು ಹಾಸ್ಯಸ್ಪದ. ಈಗಿರುವ ತಾಲೂಕುಗಳನ್ನ ಅಭಿವೃದ್ಧಿಪಡಿಸುವುದನ್ನ ಬಿಟ್ಟು ಹೊಸ ತಾಲೂಕುಗಳ ಘೋಷಣೆ ಮಾಡುವ ಅಗತ್ಯ ಏನಿತ್ತು..? - ಸಂತೋಷ್, ಉಪನ್ಯಾಸಕ, ಉಪ್ಪಿನಂಗಡಿ
ಮಂಗಳೂರು - ಅತ್ರಾಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ'- ಕುಶಾಲಪ್ಪ, ಗ್ರಾಮಸ್ಥ, ಅತ್ರಾಡಿ
' ಕರಾವಳಿಯಲ್ಲಿ ಪಶ್ಚಿಮ ವಾಹಿನಿ ಯೋಜನೆ ಮಾಡಲು ಮುಂದಾಗಿರುವುದು ಒಳ್ಳೆಯ ನಿರ್ಧಾರ. ' - ರೇಶ್ಮಾ, ಕುಂಟಿಕಾನ
'ಸಿಎಂ ಸಿದ್ದರಾಮಯ್ಯ ರೈತರ ಸಾಲಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಾಲ ಮನ್ನಾ ಮಾಡದೇ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿರುವುದು ಸರಿಯಲ್ಲ.' - ಶರತ್, ಬಿ.ಸಿ.ರೋಡ್
'ಸಸಿಹಿತ್ಲು ಬೀಚ್ ನಲ್ಲಿ ರಾಷ್ಟ್ರೀಯ ಸರ್ಫೀಂಗ್ ಉತ್ಸವ ಮಾಡಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಇಂತಹ ಉತ್ಸವಗಳನ್ನ ಆಯೋಜಿಸುವುದರಿಂದ ಮಂಗಳೂರು ಇನ್ನಷ್ಟು ಅಭಿವೃದ್ಧಿಗೊಳ್ಳಬಹುದು..' - ನಝೀರ್, ಸವಾದ್, ಸ್ಥಳೀಯರು, ಸಸಿಹಿತ್ಲು
'ಮೂರು ಕೋಟಿ ವೆಚ್ಚದಲ್ಲಿ ನಮ್ಮ ಊರಲ್ಲಿ ಪ್ರಾದೇಶಿಕ ಆರೋಗ್ಯ ಸಂಸ್ಥೆ ಯನ್ನ ಸ್ಥಾಪಿಸಲು ಮುಂದಾಗಿರುವುದು ಈ ಸಲದ ಬಜೆಟ್ ನ ಸ್ಪೆಷಲ್. ಇದು ಜನಪರ ಬಜೆಟ್.' - ಡಾ. ಇಬ್ರಾಹಿಂ, ಬಿ.ಸಿ.ರೋಡ್
ಈ ಸಲದ ರಾಜ್ಯ ಬಜೆಟ್ ನಲ್ಲಿ ಸಿಎಂ ವಿದ್ಯಾರ್ಥಿಗಳಿಗೆ ಚೂಡಿದಾರ, ಸಮವಸ್ತ್ರ, ಲ್ಯಾಪ್ ಟಾಪ್ ನೀಡುತ್ತಾರೆ ಎಂದು ಹೇಳಿದ್ದಾರೆ. ಇದು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಕೊಡುಗೆ ಎನ್ನಬಹುದು. - ಸುನೈನ್, ವಿದ್ಯಾರ್ಥಿ, ಉರ್ವಸ್ಟೋರ್