'ಕಾನೂನಿನ ಹೆಸರಿನಲ್ಲಿ ಕರಾವಳಿಯಲ್ಲಿ ದೌರ್ಜನ್ಯ' - ಕುಮಾರಸ್ವಾಮಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಪೊಲೀಸರಿಗೆ ಅಧಿಕಾರ ಇಲ್ಲ. ಅಹ್ಮದ್ ಖುರೇಶಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕಾರ್ಯವೈಖರಿ ಅನುಮಾನಸ್ಪದವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಂಗಳೂರು, ಎಪ್ರಿಲ್ 17: ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಅಹ್ಮದ್ ಖುರೇಶಿ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ.
"ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಪೊಲೀಸರಿಗೆ ಅಧಿಕಾರ ಇಲ್ಲ. ಪೊಲೀಸ್ ವರದಿಗೂ (ಅಹ್ಮದ್ ಖುರೇಶಿ ಮೇಲಿನ ದೌರ್ಜನ್ಯ) ಪ್ರಕರಣಕ್ಕೂ ಹಲವು ವ್ಯತ್ಯಾಸಗಳಿವೆ. ಪೊಲೀಸ್ ಇಲಾಖೆ ಕಾರ್ಯವೈಖರಿ ಅನುಮಾನಸ್ಪದವಾಗಿದೆ. ಆರೋಪಿಗೆ ಕಿಡ್ನಿ ಸಮಸ್ಯೆ ಇದ್ರೂ ಪೊಲೀಸರು ದೈಹಿಕ ದೌರ್ಜನ್ಯ ಎಸಗಿದ್ದಾರೆ," ಎಂದು ಆರೋಪಿಸಿದರು.[ಸಚಿವ ಖಾದರ್ ಅಭಿಮಾನಿ, ಪಿಎಫ್ಐ ಸಂಘಟಕರ ಮಧ್ಯೆ ಸೋಷಿಯಲ್ ವಾರ್]
ಇದೇ ವೇಳೆ ಕಾನೂನಿನ ಹೆಸರಿನಲ್ಲಿ ಜಿಲ್ಲೆಯಲ್ಲಿ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬರಗಾಲದ ಕುರಿತು ಮಾತನಾಡಿದ ಹೆಚ್ ಡಿಕೆ, "ರಾಜ್ಯದಲ್ಲಿ ತೀವ್ರ ಬರಗಾಲವಿದೆ. ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಎಡವಿದೆ. ಮೇವು ಸರಬರಾಜು ವಿಚಾರದಲ್ಲಿ ಅಕ್ರಮವಾಗುತ್ತಿದೆ. ರೈತರ ವಿಶ್ವಾಸ ಗಳಿಸಲು ಸರ್ಕಾರ ವಿಫಲವಾಗಿದೆ," ಎಂದು ಆರೋಪಿಸಿದರು.[ಭಜರಂಗ ದಳದಂತೆ ಪಿಎಫ್ಐ ಕೂಡಾ ಕೋಮುವಾದಿ - ಕೋಡಿಜಾಲ್]
ರಾಜ್ಯದ ಜನತೆಯ ಸಮಸ್ಯೆ ಬಗೆಹರಿಸುವ ಬದಲು ಸರಕಾರ ಉಪಚುನಾವಣೆಯಲ್ಲಿ ಗೆದ್ದ ಬಳಿಕ ಹೈಕಮಾಂಡ್ ಬಳಿ ಸುತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.
ಸೋಮವಾರ ಮಂಗಳೂರಿಗೆ ಭೇಟಿ ನೀಡಿದ ಕುಮಾರಸ್ವಾಮಿ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.