ಮಂಗಳೂರು ಮೇಯರ್ ಕವಿತಾ ಜತೆ ಕರಾಟೆ ಆಡಿದ ಸಿದ್ದರಾಮಯ್ಯ
ಮಂಗಳೂರು, ನವೆಂಬರ್ 04 : ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಇಂದು (ಶನಿವಾರ) ಚಾಲನೆ ನೀಡಿ ಫೈಟ್ ರಿಂಗ್ ಗೆ ಇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಮೇಯರ್ ಕವಿತಾ ಸನಿಲ್ ಅವರೊಂದಿಗೆ ಕರಾಟೆ ಆಡಿದರು.
ನ್ಯಾಷನಲ್ ಚಾಂಪಿಯನ್ ಮೇಯರ್ ಕವಿತಾ ಸನಿಲ್ ಮೊದಲು ಸಿಎಂಗೆ ಕರಾಟೆ ಪಂಚ್ ನೀಡಿ ಗಮನ ಸೆಳೆದರು. ಮೇಯರ್ ನೀಡಿದ ಪಂಚ್ ಗೆ ತಿರುಗೇಟಾಗಿ ಸಿದ್ದರಾಮಯ್ಯ ಕೂಡ ಪಂಚ್ ಕೊಟ್ಟು ನೆರೆದಿದ್ದವರ ನಗೆಯ ಬುಗ್ಗೆ ಉಕ್ಕಿಸಿದರು.
ನ.4ರಿಂದ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಕರಾಟೆ ಟೂರ್ನಿ ಆರಂಭ
ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋ ಜೋ ವತಿಯಿಂದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2 ದಿನಗಳ ಕಾಲ ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ.
ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ತಮ್ಮ ಮೇಲೆ ನಡೆಯುವ ದೌರ್ಜನ್ಯ ವನ್ನು ಮೆಟ್ಟಿನಿಲ್ಲಲು ಸಮರಕಲೆಯನ್ನು ಯುವತಿಯರು ಕಲಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
'ಬ್ರೂಸ್ ಲೀ'ಯನ್ನು ನೆನೆದ ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಮರ ಕಲೆಗಳ ಲೆಜೆಂಡ್ ಎಂದೇ ಗುರುತಿಸಲಾಗುವ ಬ್ರೂಸ್ ಲೀ ಅವರನ್ನು ನೆನೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಕರಾಟೆ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ, ಬ್ರೂಸ್ ಲೀ ಅವರ ಕರಾಟೆ ಕಲೆಯನ್ನು "ಎಂಟರ್ ದಿ ಡ್ರಾಗನ್" ಚಿತ್ರದಲ್ಲಿ ನೋಡಿದ್ದೇನೆ ಎಂದು ಹೇಳಿದರು .
ತಮ್ಮ ಆತ್ಮರಕ್ಷಣೆಗೆ ಈ ಸಮರ ಕಲೆ ಸಹಕಾರಿ
ಕರಾಟೆ ಸಮರ ಕಲೆಯನ್ನು ಯುವತಿಯರು ಕಲಿಯುವುದು ಅತ್ಯಗತ್ಯ ಎಂದು ಹೇಳಿದ ಅವರು ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಲು ಹಾಗು ತಮ್ಮ ಆತ್ಮರಕ್ಷಣೆಗೆ ಈ ಸಮರ ಕಲೆ ಯುವತಿಯರಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕರಾಟೆ ಟೂರ್ನಿಯಲ್ಲಿ 1200ಕ್ಕೂ ಸ್ಪರ್ಧಾಳುಗಳು
ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಈ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 104ಕ್ಕೂ ಅಧಿಕ ಪುರುಷರು ಹಾಗೂ ಮಹಿಳಾ ವಿಭಾಗಗಳಲ್ಲಿ ಪಂದ್ಯಾಟಗಳು ನಡೆಯಲಿದ್ದು. ದೇಶದ 12ಕ್ಕೂ ಅಧಿಕ ರಾಜ್ಯಗಳಿಂದ 1200ಕ್ಕೂ ಸ್ಪರ್ಧಾಳುಗಳು ಈ ಕರಾಟೆ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ .
ಈ ಸಂದರ್ಭದಲ್ಲಿ ಹಲವರು ಉಪಸ್ಥಿತಿ
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಶಾಸಕರುಗಳಾದ ಅಭಯಚಂದ್ರ ಜೈನ್ ಮೊಯ್ದಿನ್ ಬಾವ ಸೇರಿದಂತೆ ಮಂಗಳೂರು ಮೇಯರ್ ಕವಿತಾ ಸನಿಲ್ ಉಪಸ್ಥಿತರಿದ್ದರು.