ಪೂರ್ವ ತಯಾರಿ ಇಲ್ಲದೆ ನೋಟು ನಿಷೇಧ: ಸಿದ್ದು ಆರೋಪ
ಕೇಂದ್ರ ಸರ್ಕಾರ ಪೂರ್ವ ತಯಾರಿಯಿಲ್ಲದೆ ನೋಟು ನಿಷೇಧ ಮಾಡಿರುವುದು ಸರಿಯಲ್ಲ. ಇದರಿಂದ ಜನಸಾಮಾನ್ಯರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮಂಗಳೂರು: ನವೆಂಬರ್, 20: ನಗರದ ಮಲ್ಲಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾಂಗ್ರೆಸ್ ಕಚೇರಿ "ಇಂದಿರಾಗಾಂಧಿ ಜನ್ಮಶತಾಬ್ಧಿ ಭವನ" ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಉದ್ಘಾಟಿಸಿದರು.
ರಾಜ್ಯದಲ್ಲಿ ಬರಪರಿಸ್ಥಿತಿ ಇರುವಾಗ ಮಂಗಳೂರಿನಲ್ಲಿ ಅದ್ದೂರಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡ ಬಗ್ಗೆ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಆಕ್ಷೇಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ.
ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿದೆ. ಪೂಜರಿ ಅವರ ಹೇಳಿಕೆ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡಲಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಅವರು ಯಾವುದೇ ಪೂರ್ವ ತಯಾರಿ ಇಲ್ಲದೆ ಕೇಂದ್ರ ಸರ್ಕಾರ ನೋಟುಗಳನ್ನು ನಿಷೇಧ ಮಾಡಿ ಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ ಬಿ ಐ ಗರ್ನರ್ ಗೆ ಪತ್ರ
ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದಿಂದ ಜನಸಾಮಾನ್ಯರು, ಕೂಲಿ ಕಾರ್ಮಿಕರು ದಿನನಿತ್ಯದ ಖರ್ಚುಗಳಿಗೆ ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಾನು ಪ್ರಧಾನಿ, ವಿತ್ತ ಸಚಿವರು, ಆರ್ಬಿಐ ಗವರ್ನರ್ಗೆ ಪತ್ರ ಬರೆದಿದ್ದೇನೆ.
ಜಿಲ್ಲೆಯಲ್ಲಿ ಶಕ್ತಿ ತುಂಬುವ ಕೆಲಸ: ಪರಮೇಶ್ವರ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ ಜಿಲ್ಲೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ಈ ಕ್ಷಣದಿಂದ ಇಲ್ಲಿಂದಲೇ ಪ್ರಾರಂಭಗೊಳ್ಳಲಿದೆ. ಪಕ್ಷದ ವಿವಿಧ ಘಟಕಗಳು ಕೂಡ ಇಲ್ಲೇ ಜತೆಗೂಡಿ ಕೆಲಸ ಮಾಡಲಿವೆ ಎಂದು ಹೇಳಿದರು.
ಬಹುಕಾಲದ ನನಸು: ರಮಾನಾಥ್ ರೈ
ಕಚೇರಿ ಉದ್ಘಾಟನೆ ಬಳಿಕ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತಣಾಡಿದ ಅರಣ್ಯ ಮತ್ತು ಪರಿಸ ಖಾತೆ ಸಚಿವ ರಮಾನಾಥ್ ರೈ ಅವರು "ಪಕ್ಷಕ್ಕೆ ಉತ್ತಮ ಕಟ್ಟಡ ಇರಬೇಕೆಂದು ಆಶಿಸಿದ್ದೆ. ಈಗ ನನ್ನ ಬಹುಕಾಲದ ಕನಸು ಈಡೇರಿದೆ" ಎಂದು ಹೇಳಿದರು.
ಕಟ್ಟಡಕ್ಕೆ ಇಂದಿರಾಗಾಂದಿ ಹೆಸರಿಟ್ಟುವುದು ಸಾರ್ಥಕ
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ಅನುಷ್ಠಾನಗೊಳಿಸಿದ್ದ 20 ಅಂಶಗಳ ಕಾರ್ಯಕ್ರಮದಿಂದ ಹೆಚ್ಚು ಪ್ರಯೋಜನ ಪಡೆದುಕೊಂಡವರು ಜಿಲ್ಲೆಯವರೇ ಆಗಿದ್ದಾರೆ. ಆದ್ದರಿಂದ ಈ ಕಚೇರಿಗೆ ಅವರ ಹೆಸರನ್ನೇ ಇಟ್ಟಿರುವುದು ಹೆಚ್ಚು ಸೂಕ್ತ ಎಂದು ಸಚಿವ ರಮಾನಾಥ್ ರೈ ಹೇಳಿದರು.
70 ಸಾವಿರ ಅರ್ಜಿ
ಜಿಲ್ಲೆಯಲ್ಲಿ 94ಸಿ ಮತ್ತು 94ಸಿಸಿ ಯೋಜನೆಯಡಿ 70 ಸಾವಿರ ಅರ್ಜಿಗಳು ಬಂದಿದೆ. ಅದನ್ನು ಪರಿಶೀಲಿಸಿ ಅರ್ಹರಿಗೆ ಪ್ರಯೋಜನ ಸಿಗುವಂತೆ ಮಾಡಲಾಗುವುದು. ನಗರದ ನೆಹರೂ ಮೈದಾನವನ್ನು ಬಿಜೆಪಿಯವರು ಕೇಂದ್ರ ಮೈದಾನ ಎಂದೇ ಕರೆಯುತ್ತಾರೆ ಎಂದು ಆ ಹಿನ್ನೆಲೆಯಲ್ಲಿ ಇದೀಗ ಅಲ್ಲಿ ನೆಹರೂ ಪ್ರತಿಮೆ ನಿರ್ಮಿಸಲಾಗಿದೆ. ಎಂದು ರಮಾನಾಥ್ ರೈ ಹೇಳಿದರು.
ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ
ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾರ್ಯಕರ್ತರು ಇಂದಿನಿಂದಲೇ ಪಣತೊಟ್ಟು ಶ್ರಮಿಸಬೇಕು ಎಂದು ಸಚಿವರು ಹೇಳಿದರು.
ಪ್ರಮುಖರ ಉಪಸ್ಥಿತಿ
ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಕೆ.ಎಚ್.ಮುನಿಯಪ್ಪ, ಡಿಸಿಸಿ ಅಧ್ಯಕ್ಷ ಹಾಗು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವರಾದ ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವಾ, ಅಭಯಚಂದ್ರ ಜೈನ್, ಮತ್ತಿತರರು ಉಪಸ್ಥಿತರಿದ್ದರು.