ಬಂಟರ ಸಮುದಾಯ ಸಮಾಜಕ್ಕೆ ಮಾದರಿ: ಸಿದ್ದರಾಮಯ್ಯ
ಮಂಗಳೂರು: ಸಂವಿಧಾನ, ಕಾನೂನು ಜಾರಿಯಾಗುವ ಮುನ್ನವೇ ಲಿಂಗ ಸಮಾನತೆ ಸಾರಿದ ಬಂಟರು ಸಮಾಜಕ್ಕೆ ಮಾದರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಹವಾನಿಯಂತ್ರಿತ ಬಂಟರ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅಳಿಯಕಟ್ಟು ಸಂಸ್ಕೃತಿಯನ್ನು ಹೊಂದಿರುವ ಬಂಟರಲ್ಲಿ ಪುರುಷರಂತೆ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಾಗುತ್ತದೆ.
ಈ ಸಮಾಜದಲ್ಲಿ ಬಹುತೇಕ ಮಂದಿ ಶಿಕ್ಷಣವಂತರು, ಹಣವಂತರಿದ್ದಾರೆ. ಬಂಟರು ಸಾಹಸಪ್ರಿಯರು, ಉದ್ಯಮಶೀಲರು. ಕೇವಲ ತಾವು ಹುಟ್ಟಿದ ಊರಿಗೆ ಸೀಮಿತರಾಗದೆ ದೇಶ ವಿದೇಶಗಳಲ್ಲಿ ಮಿಂಚುತ್ತಿದ್ದಾರೆ ಎಂದರು.
ಹೆಚ್ಚುವರಿ 50ಲಕ್ಷ ಅನುದಾನ..
ಬಂಟ ಸಮುದಾಯಕ್ಕೆ ಸೇರಿದವರು ರಾಜ್ಯಕ್ಕೆ ಮಾದರಿಯಾದ ಬಂಟರ ಭವನವನ್ನು ಬಂಟ್ವಾಳದಲ್ಲಿ ನಿರ್ಮಿಸಿದ್ದಾರೆ. ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬಂಟರ ಭವನಕ್ಕೆ ರಾಜ್ಯ ಸರಕಾರದಿಂದ ಈಗಾಗಲೇ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಹೆಚ್ಚುವರಿಯಾಗಿ 50 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ದೇಶ ವಿದೇಶಗಳ ವಿವಿಧ ಕ್ಷೇತ್ರದಲ್ಲಿ ಬಂಟ ಸಮುದಾಯದ ವ್ಯಕ್ತಿಗಳು ಸಶಕ್ತರಾಗಿ ತಮ್ಮ ಸಾಧನೆಯನ್ನು ಮಾಡಿದ್ದಾರೆ.
ಬಂಟರ ಭವನ ಉದ್ಘಾಟಿಸಿದ ಡಾ.ವೀರೇಂದ್ರ ಹೆಗ್ಗಡೆ
ಬಂಟರ ಭವನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆರ್ಶೀರ್ವಚನ ನೀಡಿದರು. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಗುತ್ತು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿದರು.
ಸಚಿನ್ ತೆಂಡೂಲ್ಕರ್, ಫಡ್ನವೀಸ್ ಗೈರು..
ಬಂಟ್ವಾಳ ತಾಲೂಕು ಬಂಟರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಬಹು ನಿರೀಕ್ಷೆಯಲ್ಲಿದ್ದ ರಾಜ್ಯ ಸಭಾ ಸದಸ್ಯ ಹಾಗೂ ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರವರ ಅನುಪಸ್ಥಿತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇಬ್ಬರು ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಸಂಘಟಕರು ಸಭೆಗೆ ತಿಳಿಸಿದರು.
ಅವರೂ ಬಂದಿದ್ದರೆ ಚೆನ್ನಾಗಿರುತ್ತಿತ್ತು...
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಪ್ರಸ್ತಾಪಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಬರ್ತಾರೆ ಎಂದಿದ್ದರು. ಬಂದಿದ್ದರೆ ಸಂತೋಷವಾಗುತ್ತಿತ್ತು ಎಂದರು.
ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ಸಚಿನ್ ತೆಂಡುಲ್ಕರ್ ವಿದೇಶ ಪ್ರವಾಸದ ನಿಮಿತ್ತ ಕಾರ್ಯಕ್ರಮ ಹಾಜರಾಗಲಿಲ್ಲ ಇನ್ನೊಂದು ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲಿದ್ದಾರೆ ಈ ಬಗ್ಗೆ ಮಂಬೈ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷ ಡಾ.ಪಿ.ವಿ.ಶೆಟ್ಟಿ ಈ ಹೊಣೆಯನ್ನು ವಹಿಸಿಕೊಂಡಿರುವುದಾಗಿ ಸಭೆಗೆ ತಿಳಿಸಿದರು.