ಜಾಗತಿಕ ತಾಪಮಾನದ ವಿರುದ್ಧ ಯುದ್ಧ ಸಾರಿದ ಮಂಗಳೂರಿನ ಪುಟಾಣಿಗಳು
ಮಂಗಳೂರು, ಜುಲೈ 31 : ಮಳೆಗಾಲ ಆರಂಭವಾಯಿತೆಂದರೆ ಮಕ್ಕಳ ಆಟ, ತಿರುಗಾಟ ಬಂದ್ ಆಗಿ ಬಿಡುತ್ತವೆ. ಬೆಚ್ಚಗೆ ಮನೆಯಲ್ಲಿ ಪಾಠ ಓದಿಕೊಂಡು ಹರಿಯುವ ನೀರಲ್ಲಿ ದೋಣಿ ಬಿಟ್ಟು ನೋಡುವ ಆಟಕ್ಕೆ ಮಾತ್ರ ಮಕ್ಕಳು ಸೀಮಿತವಾಗಿ ಬಿಡುತ್ತಾರೆ.
ಆದರೆ ಮಂಗಳೂರಿನಲ್ಲಿ ಒಂದಿಷ್ಟು ಚಿಣ್ಣರಿದ್ದಾರೆ. ತಮ್ಮದೇ ವಯಸ್ಸಿನ ಮಕ್ಕಳ ಗುಂಪು ಕಟ್ಟಿಕೊಂಡು ತಮ್ಮ ಪಾಕೆಟ್ ಮನಿ ಖರ್ಚು ಮಾಡಿ, ಮಳೆಗಾಲದಲ್ಲಿ ಗಿಡ ನೆಡುವ ಕಾಯಕದಲ್ಲಿ ತೊಡಗಿದ್ದಾರೆ. ತಮ್ಮ ಪರಿಸರದ ಮನೆ ಮನೆಗೆ ತೆರಳಿ ಸಸಿ ನೀಡಿ ಪರಿಸರ ಜಾಗೃತಿಯ ಮಾಹಿತಿ ನೀಡುತ್ತಿದ್ದಾರೆ.
ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ
ಮಂಗಳೂರು ಹೊರವಲಯದ ಎಕ್ಕೂರು ಸಮೀಪದ ಜೆಪ್ಪಿನಮೊಗರು ಪರಿಸರ ಈ ಗ್ರೀನ್ ವಾರಿಯರ್ಸ್ ಮಕ್ಕಳ ಸೈನ್ಯದ ಕಾರ್ಯಕ್ಷೇತ್ರ. ಈ ಗ್ರೀನ್ ವಾರಿಯರ್ಸ್ ಸೈನ್ಯಕ್ಕೆ ನಾಯಕಿ 10 ವರ್ಷದ ಹನಿ.
ನಗರದ ಸಂತ ಅಗ್ನೇಸ್ ಶಾಲೆಯಲ್ಲಿ 5 ನೇ ತರಗತಿ ಕಲಿಯುತ್ತಿರುವ ಹನಿ, ಕಳೆದ ಬೇಸಿಗೆಯಲ್ಲಿ ವಿಪರೀತ ಸೆಕೆ ಇದ್ದ ಹಿನ್ನಲೆಯಲ್ಲಿ ಮನೆಗೆ ಬಂದು ಅಮ್ಮನಲ್ಲಿ ಸೆಕೆಗೆ ಕಾರಣ ಕೇಳಿದಾಗ ಕ್ಷೀಣಿಸುತ್ತಿರುವ ಗಿಡಮರಗಳ ಸಂಖ್ಯೆ ಎಂದು ಉತ್ತರ ಬಂತು. ಆಗಲೇ ಪುಟ್ಟ ಹನಿಗೆ ಗಿಡ ನೆಡುವ ಯೋಚನೆ ಬೇರೂರಿತು. ತಾನಿರುವ ಬಾಡಿಗೆ ಮನೆಯಲ್ಲಿ ಗಿಡ ನೆಡಲು ಅವಕಾಶ ಇರದ ಹಿನ್ನಲೆಯಲ್ಲಿ ಪರಿಸರದ ಮನೆಗಳಲ್ಲಿ ಗಿಡ ನೆಡಲು ನಿರ್ಧರಿಸಿದಳು.
ತನ್ನ ವಯಸ್ಸಿನ ಗೆಳೆಯರ ತಂಡ ಒಂದನ್ನು ಕಟ್ಟಿ ತಮ್ಮ ಪಾಕೆಟ್ ಮನಿ ಸಂಗ್ರಹಿಸಿ ಸಸಿಗಳನ್ನು ಖರೀದಿಸಿ ತಂದು ಪರಿಸರದ ಮನೆ ಮನೆಗೆ ತೆರಳಿ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಲು ಆರಂಭಿಸಿದರು.
ಹೀಗೆ ಆರಂಭವಾದ ಗ್ರೀನ್ ವಾರಿಯರ್ಸ್ ತಂಡ ಈಗ ಪರಿಸರ ಜಾಗೃತಿ ಜವಬ್ದಾರಿ ಹೊತ್ತಿದೆ. ಮಳೆಗಾಲದಲ್ಲಿಯೂ ಈ ಗ್ರೀನ್ ವಾರಿಯರ್ಸ್ ಮಕ್ಕಳ ಸೈನ್ಯ ಮನೆ ಮನೆಗೆ ತೆರಳಿ ಪರಿಸರ ಜಾಗೃತಿ ಸಂದೇಶ ನೀಡಿ ಸಸಿ ನೆಡುವ ಕಾಯಕ ಇಂದಿಗೂ ಮುಂದುವರೆಸಿದ್ದಾರೆ.
ಈ ಪುಟಾಣಿಗಳ ಪರಿಸರ ಜಾಗೃತಿ ಕಾಯಕಕ್ಕೆ ಪಾಲಕರೂ ಕೈಜೋಡಿಸಿದ್ದಾರೆ. ಪರಿಸರದ ಜಾಗೃತಿ ಕುರಿತು ಚಾರ್ಟ್ ತಯಾರಿಸಿ ಮನೆ ಮನೆಗೆ ತೆರಳುವ ಈ ಮಕ್ಕಳು ಚಾರ್ಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮಕ್ಕಳ ಸೈನ್ಯದ ಕಾಯಕಕ್ಕೆ ಪರಿಸರದ ಜನರು ಸಹಕಾರ ನೀಡುತ್ತಿದ್ದಾರೆ. ತಮ್ಮ ಮನೆಯ ಪರಿಸರದಲ್ಲಿ ಸಸಿ ನೆಡಲು ಜಾಗ ನೀಡುತ್ತಿದ್ದಾರೆ.
ಈ ಮಕ್ಕಳ ಸೈನ್ಯ ಇತ್ತೀಚೆಗೆ ಜೆಪ್ಪಿನ ಮೊಗರು ವ್ಯಾಪ್ತಿಯಲ್ಲಿ ಊರವರ ಸಹಕಾರದೊಂದಿಗೆ ಸುಮಾರು 200 ಗಿಡಗಳನ್ನು ನೆಟ್ಟು, ಅದರ ಸಲಹಾ ಪೋಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಇದು ಇತರರಿಗೂ ಮಾದರಿಯಾಗಿದೆ. ಈ ಪುಟಾಣಿಗಳ ಪರಿಸರ ಪ್ರೇಮ ಪ್ರತಿಯೊಬ್ಬರು ಶ್ಲಾಘಿಸಲೇಬೇಕು.