ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ
ಮಂಗಳೂರು, ಆಗಸ್ಟ್ 13 : ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಕುಮಾರಸ್ವಾಮಿ ಅವರು ಪವಿತ್ರ ಕ್ಷೇತ್ರವಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಾಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಹಾಸನದ ಮೂಲಕ ಶಿರಾಡಿ ಮಾರ್ಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಕುಮಾರಸ್ವಾಮಿ ದೇವಾಲಯಕ್ಕೆ ತೆರಳಿ ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಂಜುನಾಥನ ಸನ್ನಿಧಿಗೆ ಸಿದ್ದು, ಮೈತ್ರಿ ಸರಕಾರದ ಮುಂದಿನ ದೃಶ್ಯ ಏನು?
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ದೇವೇಗೌಡರ ಪತ್ನಿ ಚೆನ್ನಮ್ಮ, ಅನಿತಾ ಕುಮಾರಸ್ವಾಮಿ ಅವರು ಮಂಜುನಾಥನ ಸನ್ನಿಧಿಯಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಇಂದು ಸಂಜೆ 4.30ಕ್ಕೆ ಮುಖ್ಯಮಂತ್ರಿಗಳು ಮತ್ತು ಕುಟುಂಬಸ್ಥರ ಧರ್ಮಸ್ಥಳ ಕ್ಷೇತ್ರದ ಭೇಟಿ ನಿಗದಿಯಾಗಿತ್ತು. ಆದರೆ, 6 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸಿದರೂ ಜ್ಯೋತಿಷಿಗಳ ಸೂಚನೆ ಮೇರೆಗೆ ರಾತ್ರಿ 9 ಗಂಟೆಗೆ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದರು.
ದೇವಾಲದಲ್ಲಿ ಮಂಜುನಾಥನಿಗೆ ಶತರುದ್ರಾಭಿಷೇಕ ಪೂಜೆ ಸಲ್ಲಿಸಿದರು. ಇಂದು ಧರ್ಮಸ್ಥಳದಲ್ಲಿಯೇ ರಾತ್ರಿ ವಾಸ್ತವ್ಯ ಹೂಡಲಿರುವ ಕುಮಾರಸ್ವಾಮಿ ಅವರು ನಾಳೆ ಮುಂಜಾನೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ಕುಕ್ಕೆ ಸುಬ್ರಮಣ್ಯದ ಭೇಟಿ ಬಳಿಕ ಮುಖ್ಯಂತ್ರಿ ಕುಮಾರ ಸ್ವಾಮಿ ಅವರು ಸುಳ್ಯ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.