'ಹಿಂದೂ ವಿರೋಧಿಯೆಂದು ರಾಜಕೀಯ ಮಾಡೋರನ್ನು ಒದ್ದೋಡಿಸಬೇಕು'
ಮಂಗಳೂರು, ಡಿಸೆಂಬರ್ 1: ದೇಶದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ ಎಂದು ನಿವೃತ್ತ ನ್ಯಾ. ಎಚ್. ಎಸ್. ನಾಗಮೋಹನ್ ದಾಸ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಿರುವ ಜನನುಡಿ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ, ಅವರು ಮಾತನಾಡಿದರು.
ದೇಶದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಒತ್ತಡ ಹೇರಲಾಗುತ್ತಿದೆ. ಅಯೋಧ್ಯೆ ವಿಚಾರದಲ್ಲಿ ಹೀಗೇ ತೀರ್ಪು ನೀಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಇಷ್ಟು ಸಮಯದ ಒಳಗೆ ತೀರ್ಪು ನೀಡಬೇಕೆಂಬ ಸೂಚನೆ ನೀಡಲಾಗುತ್ತಿದೆ. ತೀರ್ಪು ಒಪ್ಪಿಗೆ ಆಗದಿದ್ದರೆ ನಾವು ಸಹಿಸಲ್ಲ ಎನ್ನುವವರಿದ್ದಾರೆ. ಸುಪ್ರೀಂ ಆದೇಶವನ್ನು ಧಿಕ್ಕರಿಸುವ ಕೆಲಸ ಆಗುತ್ತಿರುವುದು ದೇಶದ ದುರಂತ ಎಂದು ಅಭಿಪ್ರಾಯ ಪಟ್ಟರು.
ಮಹಿಳೆಯರನ್ನು ನೋಡಲಿಚ್ಛಿಸದ ದೇವರು, ದೇವರೇ ಅಲ್ಲ: ಪ್ರಕಾಶ್ ರೈ
ಈ ಸಂದರ್ಭದಲ್ಲಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರೈ, ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಜನರಲ್ಲಿ ಚೈತನ್ಯ ಮೂಡಿಸುವ ಕಾರ್ಯಕ್ರಮ ಜನನುಡಿ. ಸಮಾಜದಲ್ಲಿ ಆರೋಗ್ಯಕರ ಚಿಂತನೆ ಹೆಚ್ಚಿಸುವ ಸಭೆಗಳು ನಡೆಯುತ್ತಿರಬೇಕು. ನನ್ನಲ್ಲಿ ಮೂರು ವೋಟರ್ ಐಡಿ ಹೊಂದಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಯಾರಿಗೆ ಹಾಗೆ ಅನಿಸಿದೆಯೋ ಅದನ್ನು ಅವರು ರುಜುವಾತು ಮಾಡಲಿ ಎಂದರು.
ತಮಿಳುನಾಡಿನ ಅಡ್ಯಾರ್ ನಲ್ಲಿ ವೋಟರ್ ಐಡಿ
ನನ್ನ ಬಳಿ ಇರುವುದು ಒಂದೇ ವೋಟರ್ ಐಡಿ. ಆರೋಪ ಮಾಡಿದವರಿಗೆ ತಪ್ಪು ಮಾಹಿತಿಯೂ ಸಿಕ್ಕಿರಬಹುದು. ಈ ಆರೋಪದ ಹಿಂದೆ ರಾಜಕೀಯ ವಿಚಾರವೂ ಇರಬಹುದು. ನಾನು ಭಾರತದ ಪ್ರಜೆ, ಎಲ್ಲಿ ಬೇಕಾದರೂ ವೋಟು ಮಾಡಬಹುದು. ನಾನು ತಮಿಳುನಾಡಿನ ಪ್ರಜೆ, ತಮಿಳುನಾಡಿನ ಅಡ್ಯಾರ್ ನಲ್ಲಿ ನನ್ನ ವೋಟರ್ ಐಡಿ ಇರೋದು ಎಂದು ಹೇಳಿದರು.
ನಾಲ್ಕನೇ ಬಾರಿಗೆ ರೈತರು ಸಮಸ್ಯೆ ಹೇಳಿದ್ದಾರೆ
ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಮೋದಿ ಸರಕಾರ ರೈತರ ಸಮಸ್ಯೆ ಕೇಳಬೇಕು. ನಾನು ಮೋದಿಯರನ್ನು ದ್ವೇಷಿಸಿ ಮಾತನಾಡುತ್ತಿಲ್ಲ. ಮೋದಿ ಇಷ್ಟವಾದರೂ ಇಲ್ಲವಾದರೂ ದೇಶದ ಪ್ರಧಾನಿ. ನಾಲ್ಕನೇ ಬಾರಿ ರೈತರು ಮೋದಿಯವರಲ್ಲಿ ಸಮಸ್ಯೆ ಹೇಳಿದ್ದಾರೆ. ಸಾಲಮನ್ನಾ ಮಾಡಿ ಎಂದು ಸಾಕಷ್ಟು ಬಾರಿ ರೈತರು ಕೇಳಿದ್ದಾರೆ. ರೈತರು ತಮ್ಮ ಬೆಳೆಗೆ ಬೆಲೆ ಕೇಳಿದ್ದಾರೆ. ಕೇಂದ್ರ ಸರಕಾರ ಯಾಕೆ ಬೆಲೆ ಪರಿಷ್ಕರಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಹತ್ತು ಶಾಲೆಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ
ಜಸ್ಟ್ ಆಸ್ಕಿಂಗ್ ಅಭಿಯಾನ ಕೇವಲ ಪ್ರಶ್ನೆ ಕೇಳೋದು ಮಾತ್ರವಲ್ಲ. ಜಸ್ಟ್ ಆಸ್ಕಿಂಗ್ ಅಭಿಯಾನ ನಡೆಯುತ್ತಲೇ ಇದೆ. ನಾನು 10 ಶಾಲೆಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಹಳ್ಳಿಗಳನ್ನು ದತ್ತು ಪಡೆದಿದ್ದೇವೆ. ಕೇಂದ್ರ ಹಾಗೂ ರಾಜ್ಯದ ನಿಲವನ್ನು ಪ್ರಶ್ನಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಶಬರಿಮಲೆ ವಿಚಾರದಲ್ಲಿ ರಾಜಕೀಯ ತಪ್ಪು
ಶಬರಿಮಲೆ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆಯನ್ನು ಟೀಕಿಸಿದ ಪ್ರಕಾಶ್ ರೈ, ಶಬರಿಮಲೆ ವಿಚಾರದಲ್ಲಿ ರಾಜಕೀಯ ಮಾಡುವುದು ತಪ್ಪು. ಆಚಾರವೇ, ಸಮಾನತೆಯೇ ಎಂಬ ನೆಲೆಯಲ್ಲಿ ಚರ್ಚೆಯಾಗಲಿ. ಅದು ಬಿಟ್ಟು ಸಂಸದರು, ಸಚಿವರು ಅಲ್ಲಿಗೆ ತೆರಳಿ ಜನ ಸೇರಿಸುವ ಅಗತ್ಯ ಏನಿದೆ? ಹಿಂದೂ ವಿರೋಧಿಯೆಂದು ರಾಜಕೀಯ ಮಾಡೋರನ್ನು ಒದ್ದೋಡಿಸಬೇಕಾಗಿದೆ. ಕೇರಳ ಸರಕಾರ ಪರಿಸ್ಥಿತಿ ಮನಗಂಡು, ಕಾಲಾವಕಾಶ ಕೇಳಬಹುದಿತ್ತು. ಭಕ್ತರ ಆಶಯಗಳನ್ನು ಅರ್ಥ ಮಾಡುವ ಕೆಲಸ ಮಾಡಬೇಕಾಗಿತ್ತೇನೋ ಎಂದು ಅವರು ಹೇಳಿದರು.