ವಿವಾಹೇತರ ಸಂಬಂಧದ ಬಗ್ಗೆ ಡಿಗ್ರಿ ಪಾಠ, ಸುದ್ದಿಯಲ್ಲಿದೆ ಮಂಗಳೂರು ವಿವಿ
ಮಂಗಳೂರು, ಜುಲೈ 10 : ಮಂಗಳೂರು ವಿಶ್ವವಿದ್ಯಾನಿಲಯವು ಪಠ್ಯಪುಸ್ತಕ ಪಾಠವೊಂದರ ವಿಚಾರದಲ್ಲಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ. ದ್ವಿತೀಯ ಬಿಕಾಂ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲತೆ ಬಿಂಬಿಸುವ ಕಥೆಯೊಂದನ್ನು ಪಠ್ಯವಾಗಿ ನೀಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ದ್ವಿತೀಯ ಬಿಕಾಂ ಪದವಿಗೆ ಅಳವಡಿಸಿರುವ ಕನ್ನಡ ಪಠ್ಯ ಪುಸ್ತಕ 'ನುಡಿ ನೂಪುರ'ದಲ್ಲಿ 'ಮಗುವಿನ ತಂದೆ ' ಎಂಬ ಪಾಠ ಈಗ ವಿವಾದಕ್ಕೆ ಗುರಿಯಾಗಿದೆ. ಇದರಲ್ಲಿ ಆಶ್ಲೀಲತೆಯನ್ನು ಬಿಂಬಿಸಲಾಗಿದೆ ಎಂದು ಭಾರೀ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಅನೈತಿಕ ಸಂಬಂಧ, ಗಂಡನ ಮರ್ಮಾಂಗಕ್ಕೆ ಸಂಚಕಾರ
ಈ ಪಾಠದಲ್ಲಿ ಅಕ್ರಮ ಸಂಬಂಧದಲ್ಲಿ ತಪ್ಪಿಲ್ಲ ಎಂಬಂತೆ ಬಿಂಬಿಸುವ ಕಥೆಯನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಪಾಠದಲ್ಲಿ ವಿವಾಹೇತರ ಸಂಬಂಧವನ್ನು ಲಘು ಭಾಷೆಯಲ್ಲಿ ವಿವರಿಸಿದ್ದು, ಇದನ್ನು ಬೋಧಿಸುವ ಉಪನ್ಯಾಸಕರಿಗೆ ಮುಜುಗರ ಸೃಷ್ಟಿಸುವಂತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ .
ವೈದ್ಯರೊಬ್ಬರ ಪತ್ನಿಗೆ ಪತಿಯಿಂದ ಶಾರೀರಿಕ ಸುಖ ದೊರೆಯದ ಕಾರಣ ಅನ್ಯ ಯುವಕನೊಂದಿಗೆ ಅನೈತಿಕ ಸಂಬಂಧವನ್ನು ಹೊಂದುತ್ತಾಳೆ. ಬಳಿಕ ಈ ಅನೈತಿಕ ಸಂಬಂಧದಿಂದ ಮಗುವೊಂದನ್ನು ಪಡೆಯುತ್ತಾಳೆ. ಆ ಮಗು ತನ್ನ ಗಂಡನದೇ ಅಥವಾ ಅನೈತಿಕ ಸಂಬಂಧದಿಂದ ಹುಟ್ಟಿದ್ದೇ ಎನ್ನುವ ಗೊಂದಲದಲ್ಲಿರುವ ಹೆಣ್ಣಿನ ಕಥೆ ಇದಾಗಿದೆ.
ಈ ಕಥೆಯಲ್ಲಿ ಯುವಕ ಮತ್ತು ವೈದ್ಯನ ಪತ್ನಿ ಮಧ್ಯೆ ನಡೆಯುವ ಮಿಲನ ಕ್ರಿಯೆಯನ್ನು ಅಸಹ್ಯ ರೀತಿಯಲ್ಲಿ ವಿವರಿಸಲಾಗಿದೆ. ಹದಿಹರೆಯದ ವಿದ್ಯಾರ್ಥಿಗಳ ಮುಂದೆ ಇದನ್ನು ಪಾಠ ಮಾಡಬೇಕಾದ ಅನಿವಾರ್ಯ ಉಪನ್ಯಾಸಕರದ್ದಾಗಿದೆ. ಮಟ್ಟಾರು ವಿಠಲ ಹೆಗ್ಡೆ ಎಂಬುವವರು 1939ರಲ್ಲಿ ಬರೆದ ಈ ಕಥೆಯನ್ನು ಈಗ ಪಠ್ಯವಾಗಿ ಸೇರಿಸಿಕೊಂಡಿದ್ದರ ಉದ್ದೇಶವೇನು ಅನ್ನೋ ಪ್ರಶ್ನೆಯನ್ನು ಉಪನ್ಯಾಸಕರು ಮುಂದಿಟ್ಟಿದ್ದಾರೆ.
ವಿವಾಹೇತರ ಸಂಬಂಧದ ಚಿತ್ರಣ ತಿಳಿಸಿ, ಯಾವ ರೀತಿ ವಿಕೃತಿಯನ್ನು ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಹೇರುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ವಿಶ್ವ ವಿದ್ಯಾನಿಲಯದ ಪಠ್ಯ ಈಗಷ್ಟೆ ಮುದ್ರಣ ಆಗಿ ವಿದ್ಯಾರ್ಥಿಗಳ ಕೈ ಸೇರಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಗಂಡು- ಹೆಣ್ಣಿನ ಸಂಬಂಧದ ಚಿತ್ರಣದ ಜೊತೆಗೆ ಅಪರಿಚಿತನಿಂದ ಆದ ಗರ್ಭದಾನವನ್ನು ಒಬ್ಬ ವೈದ್ಯನಾಗಿ ಒಪ್ಪಿಕೊಳ್ಳುವ ಪ್ರಗತಿಪರ ಚಿಂತನೆ ಮತ್ತು ಆಧುನಿಕ ಮನೋಭಾವವನ್ನು ಲೇಖಕರು ವಿವರಿಸಿದ್ದಾರೆ ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.
ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ 'ಯುದ್ಧ' ಎನ್ನುವ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿತ್ತು. ಅದರಲ್ಲಿ ಸೈನಿಕರನ್ನು ಶತ್ರುಗಳಂತೆ ಬಿಂಬಿಸಿದ ಆರೋಪ ಬಂದು, ಮಂಗಳೂರು ವಿಶ್ವವಿದ್ಯಾನಿಲಯ ವಿವಾದಕ್ಕೆ ಕಾರಣವಾಗಿತ್ತು. ಈಗ 'ಮಗುವಿನ ತಂದೆ' ಎಂಬ ಲೇಖನವನ್ನು ಪಠ್ಯವಾಗಿ ಅಳವಡಿಸಿ, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.