ನ. 3ರ ವರೆಗೆ ಚೈತ್ರಾ ಕುಂದಾಪುರ ಸೇರಿ 6 ಮಂದಿ ನ್ಯಾಯಾಂಗ ಬಂಧನಕ್ಕೆ
ಮಂಗಳೂರು, ಅಕ್ಟೋಬರ್ 25: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಸೇರಿದಂತೆ 6 ಮಂದಿಯನ್ನು ಸುಳ್ಯ ನ್ಯಾಯಾಲಯವು ನವೆಂಬರ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ವಿವಾದ ತಾರಕಕ್ಕೇರಿ, ಎರಡು ಗುಂಪುಗಳ ಮಧ್ಯೆ ಬೀದಿ ಕಾಳಗವಾಗಿತ್ತು. ಈ ಘರ್ಷಣೆಯಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ವೇಲೆ ಹಲ್ಲೆ ನಡೆಸಲಾಗಿತ್ತು.
ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ಕುಂದಾಪುರ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರವೂ ಇಬ್ಬರ ನಡುವೆ ದೂರವಾಣಿಯಲ್ಲೇ ಮಾತಿನ ಚಕಮಕಿಯೂ ನಡೆದಿತ್ತು. ಬಳಿಕ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡ ಸುಬ್ರಹ್ಮಣ್ಯದಲ್ಲಿರುವ ಗುರುಪ್ರಸಾದ್ ಪಂಜ ಅಂಗಡಿಯ ಬಳಿ ಸೇರಿ, ಅವರ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯಲ್ಲಿ ಗುರುಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದರು.
ಬೀದಿ ಕಾಳಗವಾಗಿ ಮಾರ್ಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವಿವಾದ
ಈ ಮಧ್ಯೆ ಹಲ್ಲೆಗೊಳಗಾದ ಗುರುಪ್ರಸಾದ್ ಪಂಜ ಹಾಗೂ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಚೈತ್ರಾ ಕುಂದಾಪುರ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಬ್ರಹ್ಮಣ್ಯ ಠಾಣೆಯಲ್ಲಿ ಗುರುಪ್ರಸಾದ್ ಮೇಲೆ ಚೈತ್ರಾ ಕುಂದಾಪುರ ಮಾನಭಂಗದ ದೂರು ದಾಖಲಿಸಿದೆರೆ, ಗುರುಪ್ರಸಾದ್ ಪಂಜ ಚೈತ್ರಾ ಹಾಗೂ ಆಕೆಯ 6 ಮಂದಿ ಸಹಚರರ ವಿರುದ್ಧ ಕೊಲೆ ಯತ್ನದ ದೂರು ದಾಖಲಿಸಿದ್ದರು.
ಹಿಂದೂ ಮುಖಂಡನ ಮೇಲೆ ಹಲ್ಲೆ: ಸುಬ್ರಹ್ಮಣ್ಯ ಪೇಟೆ ಸಂಪೂರ್ಣ ಬಂದ್
ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಅವರ ಐವರು ಸಹಚರರನ್ನು ಬುಧವಾರ ರಾತ್ರಿಯೇ ಬಂಧಿಸಿರುವ ಸುಬ್ರಹ್ಮಣ್ಯ ಪೊಲೀಸರು, ಗುರುವಾರ ಬೆಳಗ್ಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚೈತ್ರಾ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಗುರುಪ್ರಸಾದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಚೈತ್ರಾ ಹಾಗೂ ಆಕೆಯ ಐವರು ಸಹಚರರನ್ನು ಪೊಲೀಸರು ಸುಳ್ಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ, ಚೈತ್ರಾ ಹಾಗೂ ಆಕೆಯ ಐವರು ಸಹಚರರಿಗೆ ನವೆಂಬರ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.