ಸಿಎಂ, ಸಚಿವರ ಫೋನ್ ಕದ್ದಾಲಿಕೆ ನಿಲ್ಲಿಸುವಂತೆ ಕೇಂದ್ರಕ್ಕೆ ಪತ್ರ
ಮಂಗಳೂರು, ಸೆಪ್ಟೆಂಬರ್ 20: ಮುಖ್ಯಮಂತ್ರಿ ಮತ್ತು ಸಚಿವರ ದೂರವಾಣಿಗಳನ್ನು ಕೇಂದ್ರ ಸರಕಾರ ಕದ್ದಾಲಿಸುತ್ತಿದೆ. ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಾಗುವುದು. ಪತ್ರದಲ್ಲಿ ಫೋನ್ ಕದ್ದಾಲಿಕೆ ನಿಲ್ಲಿಸುವಂತೆ ಕೋರಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಜಗದೀಶ್ ಕಾರಂತ್ ವಿರುದ್ಧ ಕೇಸ್ ದಾಖಲಿಸಲು ರಾಮಲಿಂಗಾ ರೆಡ್ಡಿ ಸೂಚನೆ
ಇಂದು ಮಂಗಳೂರಿಗೆ ಭೇಟಿ ನೀಡಿದ್ದ ರಾಮಲಿಂಗಾ ರೆಡ್ಡಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಪಶ್ಚಿಮ ವಲಯ ಹಾಗೂ ಕಮಿಷನರೇಟ್ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮಗಳ ಜತೆ ಅವರು ಮಾತನಾಡುತ್ತಿದ್ದರು.
ಈ ವೇಳೆ ಅವರು, "ದೂರವಾಣಿ ಕದ್ದಾಲಿಕೆಯ ವಿಚಾರದಲ್ಲಿ ನಾವು ನಮ್ಮ ಹೇಳಿಕೆಗೆ ಬದ್ದವಾಗಿದ್ದೇವೆ. ಕೇಂದ್ರ ಸರಕಾರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂಬ ವಿಚಾರ ನಮಗೆ ಮೊದಲೇ ಗೊತ್ತಿತ್ತು. ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಫೋನ್ ಕದ್ದಾಲಿಕೆ ಮಾಡುತ್ತಿದೆ," ಎಂದು ಹೇಳಿದ್ದಾರೆ.
ಗೃಹ ಸಚಿವ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡ ಭೇಟಿ
ಇನ್ನು ರಾಜ್ಯ ಸರಕಾರ ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, "ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಇಲ್ಲ. ಬಿಜೆಪಿಯವರು ರಾಜಕೀಯ ಪ್ರೇರಿತ ಆರೋಪ ಮಾಡಿದ್ದಾರೆ. ಬಿಜೆಪಿ ನಾಯಕರ ದೂರವಾಣಿ ಕದ್ದಾಲಿಸುವ ಯಾವ ಅಗತ್ಯವೂ ನಮಗಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಮೂಲಕ ಫೋನ್ ಕದ್ದಾಲಿಕೆ ವಿಚಾರ ರಾಜ್ಯದಿಂದ ಇದೀಗ ರಾಷ್ಟ್ರಮಟ್ಟಕ್ಕೆ ವಿಸ್ತರಣೆಯಾಗಿದೆ.