ತಮಿಳುನಾಡಿಗೆ ನೀರು ಬಿಡುವುದೊಂದೇ ದಾರಿ: ರಮೇಶ್ ಕುಮಾರ್
ಮಂಗಳೂರು, ಸೆಪ್ಟೆಂಬರ್ 15: ಎಷ್ಟೇ ಪ್ರತಿಭಟನೆ, ಬಂದ್ ನಡೆಸಿದರೂ ಪ್ರಯೋಜನವಿಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಸರಕಾರ ಏನೂ ಮಾಡುವಂತಿಲ್ಲ. ಈ ಆದೇಶವನ್ನು ಪಾಲನೆ ಮಾಡುವ ಕಾರ್ಯವನ್ನಷ್ಟೇ ಮಾಡಿದೆ ಎಂದು ಆರೋಗ್ಯ ಸಚಿವ ರಮೇಶ್ಕುಮಾರ್ ಹೇಳಿದ್ದಾರೆ.
ಆರೋಗ್ಯ ಸಚಿವರಾದ ಬಳಿಕ ಮೊದಲ ಬಾರಿ ಮಂಗಳೂರಿಗೆ ಆಗಮಿಸಿದ ರಮೇಶ್ ಕುಮಾರ್ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯವದವರೊಂದಿಗೆ ಮಾತನಾಡಿ, ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅಂತಿಮ. ಹಾಗಿರುವಾಗ ತೀರ್ಪಿನ ಪಾಲನೆ ಅನಿವಾರ್ಯ. ಹಾಗಂತ ಈ ತೀರ್ಪು ಅಂತಿಮವೇನೂ ಅಲ್ಲ. ಸೆ.20ರಂದು ಮತ್ತೆ ವಿಚಾರಣೆ ನಡೆಯಲಿದೆ. ಆಗ ಕರ್ನಾಟಕದ ಪರವಾಗಿ ತೀರ್ಪು ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.[ತಮಿಳುನಾಡು ಬಂದ್ : ಕನ್ನಡಿಗರಿಗೆ ರಕ್ಷಣೆ ನೀಡಲು ಸಿದ್ದರಾಮಯ್ಯ ಪತ್ರ]
ಇತ್ತೀಚೆಗೆ ಜಾರಿಗೆ ಬಂದಿರುವ ಹರೀಶ್ ಸಾಂತ್ವನ ಯೋಜನೆ ವಿಫಲವಾಗುತ್ತಿರುವಂತೆ ಕಾಣುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪತ್ರಿಕ್ರಿಯಿಸಿದ ಸಚಿವರು, ಸರಕಾರದ ಯಾವುದೇ ಯೋಜನೆ ವಿಫಲವಾಗುವುದಿಲ್ಲ. ಆದರೆ ಅವು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅದು ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಈ ನಿಟ್ಟಿನಲ್ಲಿ ಹೊಸ ಆರೋಗ್ಯ ನೀತಿಯನ್ನು ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆ ಎಂದರು.