ಕರ್ನಾಟಕ ಬಂದ್ ಗೆ ಮಂಗಳೂರಿನಲ್ಲಿ ಶೇ 1 ರಷ್ಟು ಬೆಂಬಲ ಇಲ್ಲ
ಬೆಂಗಳೂರು, ಸೆ. 09: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ ಶುಕ್ರವಾರ ಆಚರಿಸಲಾಗುತ್ತಿರುವ ಕರ್ನಾಟಕ ಬಂದ್ ಗೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಆದರೆ, ಮಂಗಳೂರಿನಲ್ಲಿ ಬಂದ್ ಗೆ ಶೇ 1 ರಷ್ಟು ಬೆಂಬಲ ಸಿಕ್ಕಿಲ್ಲ.
ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬೆಂಬಲ ನೀಡದೆ ಯಥಾ ಸ್ಥಿತಿ ಕಾಯ್ದುಕೊಳ್ಳಲು ಪೂರ್ವನಿರ್ಧಾರಿತವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸೂಚನೆ ನೀಡಲಾಗಿತ್ತು. ಅದರಂತೆ, ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉಡುಪಿ, ಮಂಗಳೂರಿನಲ್ಲಿ ಜನಜೀವ ಎಂದಿನಂತೆ ಸಾಗಿದೆ. ಕೆಲ ಶಾಲಾ, ಕಾಲೇಜುಗಳು ಕಾರ್ಯನಿರ್ವಹಿಸಿದ್ದು ಬಿಟ್ಟರೆ, ಅಂಗಡಿ ಮುಂಗಟ್ಟುಗಳು, ಆಸ್ಪತ್ರೆ, ಬಸ್ ವ್ಯವಸ್ಥೆ, ಬ್ಯಾಂಕುಗಳು, ಖಾಸಗಿ ಸಂಸ್ಥೆಗಳು, ಹೋಟೆಲ್ ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
ಎತ್ತಿನಹೊಳೆ ಯೋಜನೆ ವಿರುದ್ಧ ಕುಡ್ಲದ ಜನ ಬಂದ್ ನಡೆಸಿದಾಗ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ, ಕರ್ನಾಟಕ ಬಂದ್ ಬಗ್ಗೆ ಜಿಲ್ಲೆಯಲ್ಲಿ ಒಮ್ಮತ ಮೂಡಿಲ್ಲ. ಅವಿಭಜಿತ ಕನ್ನಡ ಜಿಲ್ಲೆಗಳಲ್ಲಿನ ವಿವಿಧ ಸಂಘಟನೆಗಳು ಬಂದ್ ನಿಂದ ದೂರ ಉಳಿದಿವೆ.
ಮಹದಾಯಿಗಾಗಿ ಕರ್ನಾಟಕ ಬಂದ್ ನಡೆದಾಗ ದಕ್ಷಿಣ ಕನ್ನಡದಲ್ಲಿ ಬೆಂಬಲ ವ್ಯಕ್ತವಾಗಿರಲಿಲ್ಲ. ಈ ಬಗ್ಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. (ಒನ್ಇಂಡಿಯಾ ಸುದ್ದಿ)]