ಮಂಗಳೂರಲ್ಲಿ ಹಾಡಹಗಲೇ ಖದೀಮರಿಂದ ದೇವಸ್ಥಾನದ ದನಗಳ ಕಳ್ಳತನ
ಮಂಗಳೂರು, ಜುಲೈ 27 : ಗೋವುಗಳ ಕಳ್ಳತನ, ಸಿಕ್ಕಿಬಿದ್ದವರನ್ನು ಜನಸಮೂಹ ಕೊಂದು ಹಾಕುತ್ತಿರುವುದು ಇಡೀ ದೇಶದಾದ್ಯಂತ ನಡೆಯುತ್ತಿರುವುದು ಮತ್ತು ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿಯೇ ಮಂಗಳೂರಿನಲ್ಲಿ ಖದೀಮರು ಹಾಡಹಗಲೇ ದನಗಳನ್ನು ಕದ್ದೊಯ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದನ ಕಳ್ಳತನ ಇತ್ತೀಚಿನ ದಿನಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಮಂಗಳೂರು ಹೊರವಲಯ ಹಾಗು ಗ್ರಾಮೀಣ ಭಾಗದಲ್ಲಿ ದನಗಳ್ಳತನದ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಈ ಬಾರಿ ನಗರದ ಹೃದಯ ಭಾಗದ ದೇವಾಲಯವೊಂದರ ದನಗಳನ್ನು ಹಾಡು ಹಗಲೇ ಅಪಹರಿಸಲಾಗಿದೆ.
ಇನ್ನೊಂದು ಗಮನಿಸ ಬೇಕಾದ ಮುಖ್ಯ ಸಂಗತಿ ಎಂದರೆ, ಈ ಘಟನೆ ನಡೆದಿರುವುದು ಮಂಗಳೂರು ಪೊಲೀಸ್ ಕಮಿಷನರ್ ಮನೆಯ ಪಕ್ಕದಲ್ಲೇ.
ಗಮನ ಬೇರೆಡೆ ಸೆಳೆದು 'ಮಲಬಾರ್ ಗೋಲ್ಡ್' ನಲ್ಲಿ ಚಿನ್ನ ಲಪಟಾಯಿಸಿದ ಚೋರ
ನಗರದ ಪಾಂಡೇಶ್ವರ ಪೊಲೀಸ್ ಠಾಣೆ ಸಮೀಪವೇ ಇರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎರಡು ದನ ಮತ್ತು ಕರುವನ್ನು ಗೋ ಕಳ್ಳರು ಅಪಹರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಜುಲೈ 5ರಂದು ನಡೆದಿದೆ. ಆದರೆ ಜುಲೈ 25ರಂದು ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವ ದೇವಾಲಯದಲ್ಲಿ ದಾನವಾಗಿ ನೀಡಿದ್ದ 2 ದನ ಹಾಗು ಒಂದು ಕರುವನ್ನು ಸಾಕಲಾಗಿತ್ತು. ಈ ದನದ ಹಾಲನ್ನೇ ದೇವರ ಅಭಿಷೇಕಕ್ಕೆ ಬಳಸಲಾಗುತ್ತಿತ್ತು. ಹಾಲನ್ನು ಕರೆದ ಬಳಿಕ ದನಗಳನ್ನು ಕರುವಿನೊಂದಿಗೆ ಪಕ್ಕದಲ್ಲೇ ಮೇಯಲು ಬಿಡಲಾಗುತ್ತಿತ್ತು.
ಆದರೆ ಜುಲೈ 5ರಂದು ಕೂಡ ಎಂದಿನಂತೆ ದೇವಸ್ಥಾನದ ಸಿಬ್ಬಂದಿ ಎರಡು ದನ ಹಾಗೂ ಒಂದು ಕರುವನ್ನು ಮೇಯಲು ಬಿಟ್ಟಿದ್ದರು. ಆದರೆ ಅಂದು ಸಂಜೆ ಆದರೂ ದನಗಳು ದೇವಸ್ಥಾನಕ್ಕೆ ವಾಪಾಸ್ ಬರದೇ ಇರುವುದನ್ನು ಮನಗಂಡ ದೇವಸ್ಥಾನದ ಸಿಬ್ಬಂದಿ, ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯೇ ಪಕ್ಕದಲ್ಲಿ ಗೂಡ್ ಶೆಟ್ ರೈಲ್ವೆ ಟ್ರ್ಯಾಕ್ ಬಳಿ ಅಪರಿಚಿತರು ಮೇಯುತ್ತಿದ್ದ ದನ ಹಾಗೂ ಕರುವನ್ನು ಹಿಡಿದು ಕಾರಿನಲ್ಲಿ ತುಂಬಿಸುತ್ತಿದ್ದರು ಕಂಡಿದ್ದಾರೆ.
ದನಗಳನ್ನು ಅಪಹರಿಸುತ್ತಿರುವುದನ್ನು ಕಂಡ ದೇವಾಲಯದ ಸಿಬ್ಬಂದಿ ಬೊಬ್ಬೆ ಹಾಕಿದ್ದಾರೆ. ದನಗಳನ್ನು ಅಪರಿಚಿತ ದುಷ್ಕರ್ಮಿಗಳಿಂದ ಬಿಡಿಸಲು ಯತ್ನಿಸಿದ್ದಾರೆ. ಆದರೆ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳಿಬ್ಬರು ದೇವಸ್ಥಾನದ ಸಿಬ್ಬಂದಿಯನ್ನು ಬೆದರಿಸಿ ಬಲತ್ಕಾರವಾಗಿ ದನ ಮತ್ತು ಕರುಗಳನ್ನು ಕಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ.
ಈ ಕುರಿತು ದೇವಾಲಯದ ಸಿಬ್ಬಂದಿ ಬುಧವಾರ ಜುಲೈ 25ರಂದು ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಅವರ ಮನೆ ಇದೆ.
ಅದಲ್ಲದೇ ದೇವಾಲಯದ ಹಿಂದೆಯೇ ಪಾಂಡೇಶ್ವರ ಪೊಲೀಸ್ ಠಾಣೆಯಿದೆ. ಹೈ ಸೆಕ್ಯುರಿಟಿ ಇರುವ ಮತ್ತು ಪೊಲೀಸರ ಓಡಾಟ ನಿರಂತರವಾಗಿರುವ ಇಂತಹ ಸ್ಥಳದಿಂದಲೇ ದನಗಳನ್ನು ಹಾಡಹಗಲೇ ಅಪರಿಸಲಾಗುತ್ತದೆ ಎಂದಾದರೆ ದುಷ್ಕರ್ಮಿಗಳಿಗೆ ಪೊಲೀಸರ ಭಯ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.
ಪೊಲೀಸ್ ಠಾಣೆಯ ಪಕ್ಕದಲ್ಲೇ ಈ ರೀತಿಯ ಘಟನೆಗಳಾದರೆ ನಗರದ ಹೊರವಲಯ ಹಾಗು ಗ್ರಾಮೀಣ ಭಾಗದ ಕತೆ ಏನು ಎಂದು ಜನರು ಪ್ರಶ್ನೆ ಎತ್ತುತ್ತಿದ್ದಾರೆ.