ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರ ಮೇಲೆ ತಲವಾರು ಬೀಸಿದ ಗೋಕಳ್ಳರು
ಮಂಗಳೂರು, ಫೆಬ್ರವರಿ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದನಗಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಮಾರಕಾಸ್ತ್ರಗಳನ್ನು ಹಿಡಿದು ಮನೆ ಮಂದಿಗೆ ಬೆದರಿಕೆ ಒಡ್ಡಿ ಹಟ್ಟಿಯಿಂದ ಹಸುಗಳನ್ನು ಕದ್ದೊಯ್ಯುತ್ತಿದ್ದ ದನಗಳ್ಳರು ಈಗ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಮ್ಮ ಕರಾಳ ಹಸ್ತ ಚಾಚಿದ್ದಾರೆ.
ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ರಾಜಾರೋಷವಾಗಿ ದನಕಳ್ಳತನ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಮಹಿಳಾ ಭಕ್ತರ ಮೇಲೆ ದನಕಳ್ಳರು ತಲವಾರು ಬೀಸಿ ಬೆದರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು ಕ್ಷೇತ್ರದ ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಸುಬ್ರಹ್ಮಣ್ಯದಲ್ಲಿ ಬುಧವಾರ ತಡರಾತ್ರಿ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಐವರು ಮುಸುಕುಧಾರಿ ದುಷ್ಕರ್ಮಿಗಳ ತಂಡ ದೇವಾಲಯದ ಪರಿಸರದಲ್ಲಿದ್ದ ದನಗಳನ್ನು ಕಾರಿನಲ್ಲಿ ತುಂಬಿಕೊಂಡು ಸಾಗಿಸಿದ್ದಾರೆ ಎಂದು ಹೇಳಲಾಗಿದೆ.
ದುಷ್ಕರ್ಮಿಗಳ ಈ ಕೃತ್ಯವನ್ನು ದೇವಾಲಯದ ಪರಿಸರದಲ್ಕೇ ಇದ್ದ ಮಹಿಳಾ ಭಕ್ತರು ನೋಡಿದ್ದಾರೆ. ಈ ಹಿನ್ನಲೆಯಲ್ಲಿ ಅದನ್ನು ಪ್ರಶ್ನಿಸಿದ ಮಹಿಳಾ ಭಕ್ತರನ್ನು ದುಷ್ಕರ್ಮಿಗಳು ತಲವಾರು ಬಿಸಿ ಬೆದರಿಸಿ, ನಂತರ ಕದ್ದ ಹಸುಗಳೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಹಿಳಾ ಭಕ್ತರು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಆರಂಭಿಸಿರುವ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.