ಸ್ವಿಫ್ಟ್ ಡಿಸೈರ್-ಟ್ರಕ್ ಡಿಕ್ಕಿ, ಕಾರಿನಲ್ಲಿದ್ದ ನಾಲ್ವರು ಸಾವು
ಮಂಗಳೂರು, ಜನವರಿ 4: ಸ್ವಿಫ್ಟ್ ಡಿಸೈರ್ ಕಾರು ಹಾಗೂ ಕಂಟೈನರ್ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಸೇರಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಳ ಸಮೀಪದ ನಯಾಬಝಾರ್ ಎ.ಜೆ.ಆಂಗ್ಲ ಮಾಧ್ಯಮ ಶಾಲೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದೆ.
ತ್ರಿಸ್ಸೂರ್ ಚೇಲಕ್ಕರೆ ನಿವಾಸಿ ರಾಮನಾರಾಯಣನ್ (52), ಪತ್ನಿ ವತ್ಸಲಾ (48), ಮಗ ರಂಜಿತ್(20) ಮತ್ತು ಈತನ ಸ್ನೇಹಿತ ನಿತಿನ್ (18) ಎಂದು ಗುರುತಿಸಲಾಗಿದೆ. ರಂಜಿತ್ ಕೊಪ್ಪದಲ್ಲಿರುವ ಎಸಿಎನ್ ಆಯುರ್ವೇದ ಕಾಲೇಜ್ನ ವಿದ್ಯಾರ್ಥಿಯಾಗಿದ್ದ. ರಜೆಯಲ್ಲಿ ತ್ರಿಸ್ಸೂರ್ನಲ್ಲಿರುವ ತನ್ನ ಮನೆಗೆ ಬಂದಿದ್ದ.[ಅಶುಭ ಶುಕ್ರವಾರ : ದೇಶಾದ್ಯಂತ 30ಕ್ಕೂ ಹೆಚ್ಚು ಸಾವು]
ಈತನೊಂದಿಗೆ ಸ್ನೇಹಿತ ನಿತಿನ್ ಕೂಡ ಇದ್ದು, ಬುಧವಾರ ನಸುಕಿನ ಜಾವ ಮರಳಿ ಕಾಲೇಜಿಗೆ ಕರೆದುಕೊಂಡು ಹೋಗಲು ರಾಮನಾರಾಯಣ್ ಕುಟುಂಬ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಂಗಳೂರು ಕಡೆ ಬರುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜಗುಜ್ಜಾಗಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆಯಲು ಕೆಲ ಹೊತ್ತು ಶ್ರಮಪಡಬೇಕಾಯಿತು. ಮಂಜೇಶ್ವರ ಠಾಣೆ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.