ದತ್ತ ಜಯಂತಿ: ಭಿಕ್ಷೆ ಬೇಡಿದ ಸಿ.ಟಿ.ರವಿ
ಚಿಕ್ಕಮಗಳೂರು, ಡಿಸೆಂಬರ್ 02 : ದತ್ತಮಾಲೆ ಧರಿಸಿರುವ ಶಾಸಕ ಸಿ.ಟಿ.ರವಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ಮಂಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯ ಮನೆಗಳಲ್ಲಿ ಭಿಕ್ಷಾಟನೆ ಮಾಡಿ ಪಡಿ(ಅಕ್ಕಿ, ಬೆಲ್ಲ) ಸಂಗ್ರಹಿಸಿದರು.
ದತ್ತ ಜಯಂತಿ ಅಂಗವಾಗಿ ಪಾದುಕೆ ದರ್ಶನಕ್ಕೆ ದತ್ತ ಪೀಠಕ್ಕೆ ತೆರಳುವ ಹಿಂದಿನ ದಿನ ಭಿಕ್ಷಾಟನೆ ಮಾಡುವುದು ಸಂಪ್ರದಾಯ ಇರುವ ಕಾರಣ ದತ್ತಮಾಲಾಧಾರಿಗಳು ಸಂಪ್ರದಾಯ ಪಾಲಿಸಿದರು.
ಭಿಕ್ಷಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಟಿ. ರವಿ, 'ದತ್ತ ಜಯಂತಿ ಹಿಂದಿನದಿನ ಭಿಕ್ಷಾಟನೆ ಮಾಡಿ, ಇರುಮುಡಿ ಕಟ್ಟಿ ದತ್ತಪೀಠಕ್ಕೆ ತೆರಳಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅದರಂತೆ, ದತ್ತಮಾಲೆ ಧಾರಣೆ ಆರಂಭಿಸಿದ ವರ್ಷದಿಂದಲೂ ಈ ಪದ್ಧತಿ ಅನುಸರಿಸುತ್ತಿದ್ದೇವೆ. ಐದು ಮನೆಗಳಲ್ಲಿ ಭಿಕ್ಷಾಟನೆ ಮಾಡಿದ್ದೇವೆ. ಭಾನುವಾರ(ಡಿಸೆಂಬರ್ 03) ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ, ಪಾದಯಾತ್ರೆ ಮೂಲಕ ದತ್ತಪೀಠಕ್ಕೆ ತೆರಳುತ್ತೇವೆ' ಎಂದರು.
'ಡಿ.1ರಂದು ಅನಸೂಯಾ ಜಯಂತಿಗೆ ಹೆಚ್ಚು ಭಕ್ತಾದಿಗಳು ಬಂದಿದ್ದರಿಂದ, ವಾಹನಗಳು ಹೆಚ್ಚಾಗಿದ್ದರಿಂದ ದತ್ತಪೀಠದ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ಸಮಸ್ಯೆಯಾಯಿತು. ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡದ ಕಾರಣ ಈ ಸಮಸ್ಯೆ ಸೃಷ್ಠಿಯಾಗಿತ್ತು. ಡಿ.3ರಂದು ದತ್ತ ಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಕ್ರಮ ವಹಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ' ಎಂದು ಪ್ರತಿಕ್ರಿಯಿಸಿದರು.
'ಐ.ಡಿ ಪೀಠ ಗ್ರಾಮದ ಸರ್ವೆ ನಂ 195ರಲ್ಲಿ ದತ್ತಾತ್ರೇಯ ಪೀಠ ಇದೆ, ನಾಗೇನಹಳ್ಳಿಯ ಸರ್ವೆಯ 57ರಲ್ಲಿ ಬಾಬಾಬುಡನ್ ದರ್ಗಾ ಇದೆ ಎಂದು ಸರ್ಕಾರಿ ದಾಖಲೆಯ ಪಹಣಿಯಲ್ಲಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದತ್ತ ಪೀಠ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಸತ್ಯ ಹೇಳುವುದಕ್ಕೆ ಹಿಂಜರಿಯಬಾರದು. ನ್ಯಾಯ ದೊರಕಿಸಿಕೊಡಬೇಕು' ಎಂದು ಒತ್ತಾಯಿಸಿದರು.
ತಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕೇವಲ ಒಂದೇ ತಿಂಗಳಿನಲ್ಲಿ ದತ್ತಪೀಠ ವಿವಾದ ಬಗೆಹರಿಸುವುದಾಗಿಯೂ ಅವರು ಹೇಳಿದರು. ಭಿಕ್ಷಾಟನೆ ನಂತರ ಭಾರಿ ಸಂಖ್ಯೆಯ ಹಿಂದೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದರು.