ಭೂತಕೋಲಕ್ಕೆ ಅಪಹಾಸ್ಯ, ಸೃಜನ್ ವಿರುದ್ಧ ಕರಾವಳಿಗರ ಆಕ್ರೋಶ
ಮಜಾ ಟಾಕೀಸ್ ನಿರೂಪಕರಾದ ಸೃಜನ್ ಲೋಕೇಶ್ ತುಳುನಾಡಿನ ನಂಬಿಕೆಯ ಭೂತಾರಾಧನೆಯನ್ನು ನಿನ್ನೆ (ಭಾನುವಾರ) ಯ ಕಾರ್ಯಕ್ರಮದಲ್ಲಿ ಅಪಹಾಸ್ಯ ಮಾಡಿರುವ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಂಗಳೂರು, ಮಾರ್ಚ್ 20: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಹಾಸ್ಯ ಕಾರ್ಯಕ್ರಮ ಮಜಾ ಟಾಕೀಸ್ ನಲ್ಲಿ ಸೃಜನ್ ಲೋಕೇಶ್ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.
ಮಜಾ ಟಾಕೀಸ್ ನಿರೂಪಕರಾದ ಸೃಜನ್ ಲೋಕೇಶ್ ತುಳುನಾಡಿನ ನಂಬಿಕೆಯ ಭೂತಾರಾಧನೆಯನ್ನು ನಿನ್ನೆ (ಭಾನುವಾರ) ಯ ಕಾರ್ಯಕ್ರಮದಲ್ಲಿ ಅಪಹಾಸ್ಯ ಮಾಡಿರುವ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
'ಕರಾವಳಿಗರ ನಂಬಿಕೆಯ ಭೂತಾರಾಧನೆಯನ್ನು ಈ ರೀತಿಯಾಗಿ ಅಪಹಾಸ್ಯ ಮಾಡಿರುವುದು ನಿಜಕ್ಕೂ ಸರಿಯಲ್ಲ. ಸಂಸ್ಕೃತಿ ಸಂಪ್ರದಾಯದ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ,' ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.[ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]
ಮಜಾ ಟಾಕೀಸ್ ನಲ್ಲಿ ಏನಾಯ್ತು?
ರವಿವಾರ ಪ್ರಸಾರವಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರಲ್ಲಿ ಒಬ್ಬರು ಪ್ರಶ್ನೆಯೊಂದನ್ನು ಕೇಳುತ್ತಾರೆ. 'ಸರ್ಕಾರಿ ಕೆಲಸ ದೇವರ ಕೆಲಸ ಅಂತಾರಲ್ಲಾ ಹಾಗಾದರೆ ಕಾಲ್ಸೆಂಟರ್ ಕೆಲಸ ಏನಂತಾರೆ,' ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೃಜನ್ ಲೋಕೇಶ್, 'ದಕ್ಷಿಣ ಕನ್ನಡದಲ್ಲಿ ಭೂತ ಕುಣಿತ ಮಾಡ್ತಾರೆ ಗೊತ್ತಾ? ಸರ್ಕಾರಿ ಕೆಲಸ ದೇವರ ಕೆಲಸ ಹಾಗೆಯೇ ಕಾಲ್ಸೆಂಟರ್ ಬಂದು ಭೂತಾರಾಧನೆಯ ಕೆಲಸ. ಭೂತಾರಾಧನೆ ಮಾಡೋದು ಬರೀ ರಾತ್ರಿ ಹೊತ್ತು. ಹಾಗೆ ಕಾಲ್ಸೆಂಟರ್ ಕೂಡಾ ರಾತ್ರಿ ಹೊತ್ತು ನಡಿಯೋದು," ಎಂಬುದಾಗಿ ಅಪಹಾಸ್ಯ ಮಾಡಿದ್ದಾರೆ.[ರಾತ್ರಿಯಲ್ಲಿ ಒಂಟಿ ಮಹಿಳೆಗೆ ಸಹಾಯವಿತ್ತ ಪೊಲೀಸ್ ಗೆ ಸನ್ಮಾನ]
ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಸೃಜನ್ ಹೇಳಿಕೆ ತುಳುನಾಡ ನಂಬಿಕೆಯ ಭೂತಾರಾಧನೆಗೆ ಅಪಹಾಸ್ಯ ಮಾಡಿ ಕರಾವಳಿಗರ ಸಂಪ್ರದಾಯಕ್ಕೆ ಧಕ್ಕೆ ತರುವಂತೆ ಮಾಡಿದೆ ಎಂದು ಭೂತಾರಾಧನೆ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೃಜನ್ ಲೋಕೇಶ್ ಮುಂದಿನ ಕಾರ್ಯಕ್ರಮದಲ್ಲಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.