ಮಂಗಳೂರಿನಲಿ ಚಂದಿರನ ತಂಪಿನಲ್ಲಿ ಅರಳಿದ ಬ್ರಹ್ಮಕಮಲ
ಮಂಗಳೂರು, ಆಗಸ್ಟ್, 04 : ಆಡುಮುಟ್ಟದ ಸೊಪ್ಪಿಲ್ಲ, ಹೂಗಳನ್ನು ಇಷ್ಟಪಡದ ಮನುಜರಿಲ್ಲ. ಹೌದು ಹೂಗಳ ಸೌಂದರ್ಯವೇ ಅಂತಹದ್ದು, ಹೂಗಳು ಎಲ್ಲರ ಮನಪ್ರಿಯವಾಗಿರುವುದಕ್ಕೆ ಅವುಗಳಲ್ಲಿನ ವೈವಿಧ್ಯಮಯ ಬಣ್ಣ, ಆಕಾರ, ಅವುಗಳ ವೈಶಿಷ್ಟ್ಯವೇ ಪ್ರಮುಖ ಕಾರಣ.
ಕೆಲವು ಹೂಗಳು ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದು, ಕೆಲವು ಹೂಗಳು ಅಲ್ಪ ಆಯುಷಿಗಳಾದರೆ, ಇನ್ನು ಕೆಲವು ದೀರ್ಘಾಯುಷಿಗಳು, ಇನ್ನು ಕೆಲವು ಸೂರ್ಯನ ರಶ್ಮಿಯೊಂದಿಗೆ ತನ್ನ ಅಂದವನ್ನು ಜಗತ್ತಿಗೆ ತೋರಿಸಿದರೆ, ಇನ್ನು ಕೆಲವು ಚಂದಿರನ ತಂಪಾದ ಬೆಳಕಿನಲ್ಲಿ ತನ್ನ ಲೋಕವನ್ನು ಅರಳಿಸಿಕೊಳ್ಳುತ್ತದೆ.[ಹೂವಿನ ಸೌಂದರ್ಯ ಲೋಕ ಕಾಣಿರಿ, ಮನತುಂಬಿಕೊಳ್ಳಿರಿ]
ಅದರಲ್ಲಿ ಚಂದ ಮಾಮನ ತಂಪಿನಲ್ಲಿ ಆತನ ಬಣ್ನವನ್ನೇ ಪಡೆದು ಅರಳುವ ಏಕೈಕ ಹೂವೇ ಬ್ರಹ್ಮಕಮಲ. ಇದು ಅರಳುವುದು ಸುಮಾರು 11 ಅಥವಾ 12 ಗಂಟೆಯ ಸುಮಾರಿಗೆ. ಕಮರುವುದು ಬೆಳಗಾಗುವ ಮುಂಚೆ. ಇಂತಹ ಅಲ್ಪಾಯುಷಿ ಸುಂದರ ಹೂವು ಮೊಗ್ಗಾಗಿ ನಗರದ ಅಬ್ದುಲ್ ಅಹ್ಮದ್ ಮನೆಯಲ್ಲಿ ಅರಳಿ ತನ್ನ ಬೆಳ್ಮುಗಿಲ ಸೌಂದರ್ಯವನ್ನು ಬೀರಿದೆ. ಬನ್ನಿ ಬ್ರಹ್ಮಕಮಲದ ಸೌಂದರ್ಯ ನಾಡಲ್ಲಿ ಒಂದು ಸುತ್ತು ಹೋಗಿ ಬರೋಣ..ಇದರ ವೈಶಿಷ್ಟ್ಯತೆ ತಿಳಿಯೋಣ..
ರಾತ್ರಿ ರಾಣಿ
ಬ್ರಹ್ಮಕಮಲ ಹೂವು ಅರಳುವುದು ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ. ಇದು 'ರಾತ್ರಿ ರಾಣಿ' ಎಂಬ ಖ್ಯಾತಿಗೆ ಒಳಗಾಗಿದೆ. ಏಕಕಾಲಕ್ಕೆ 10-15 ಮೊಗ್ಗುಗಳು ಹೂವಾಗಿ ಅರಳುವುದೇ ಇದರ ವಿಸ್ಮಯತೆ. ಹಿಮಾಲಯದ ಆಸುಪಾಸಿನಲ್ಲಿ ಬೆಲೆಯುವ ಇದು ಇತ್ತೀಚಿನ ದಿನಗಳಲ್ಲಿ ಮನೆಗಳ ಸೌಂದರ್ಯ ಬಿಂದುಗಳಾಗಿವೆ. ಇದರ ಸೌಂದರ್ಯ ಕೇವಲ ಒಂದು ರಾತ್ರಿಗೆ ಮಾತ್ರ ಸೀಮಿತವಾಗಿದ್ದು, ಮೊಗ್ಗು ಅರಳುವುದನ್ನು ನೋಡಲು ನಾಲ್ಕೈದು ದಿನಗಳವರೆಗೆ ಕಾದು ಜಾಗರಣೆ ಮಾಡಬೇಕಾಗಬಹುದು.
ಎಲೆಗಳೇ ಕಾಂಡಗಳು!
ಎಲ್ಲಾ ಗಿಡಗಳು ಬೇರು, ಕಾಂಡ, ಬೀಜದಿಂದ ಬೆಳೆದರೆ ಇದು ಮಾತ್ರ ಎಲೆಯಿಂದಲೇ ದೊಡ್ಡದಾಗುತ್ತದೆ. ಗಿಡದ ಎಲೆಯನ್ನು ನೆಟ್ಟರೆ ಸಾಕು ಅದು ಗಿಡವಾಗಿ ಬೆಳೆಯುತ್ತದೆ. ಬಳಿಕ ಒಂದು ವರೆ ವರ್ಷದಲ್ಲಿ ಹೂವು ಬಿಡಲು ಆರಂಭವಾಗುತ್ತದೆ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಹೂವಿನ ಬಳ್ಳಿಯೂ ಹೆಚ್ಚಾಗಿ ಮನೆ ಅಂಗಳದಲ್ಲಿ ತನ್ನ ಸ್ಥಾನ ಪಡೆದುಕೊಳ್ಳಲಿದ್ದು, ಪೊದೆಯಂತೆ ಎತ್ತರಕ್ಕೆ ಹೋದಂತೆ ಕಾಂಡ ಕೂಡ ದಪ್ಪದಾಗುತ್ತದೆ.
ಔಷಧಿ ಗುಣಗಳು
ಸುಮಾರು ಎರಡರಿಂದ ಮೂರು ಅಡಿ ಉದ್ದ ಬೆಳೆಯುವ ಇದರ ಎಲೆ, ಕಾಂಡ, ಹೂವು, ಬೇರು ಎಲ್ಲವೂ ಆಯುರ್ವೇದದ ಔಷಧಗಳಲ್ಲಿ ಬಳಕೆಯಾಗುತ್ತದೆ. ಬೇರನ್ನು ತೇಯ್ದು ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ಮಾಯುತ್ತದೆ. ಹೂವಿನ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ.
ಬ್ರಹ್ಮ ಕಮಲ ಎಂಬ ಹೆಸರು ಹೇಗೆ ಬಂತು?
ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಬ್ರಹ್ಮ ಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ಪ್ರತೀತಿ ಇದೆ. ಕಮಲನಾಭ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ 'ಕಮಲಭವ' ಅಂದರೆ ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎಂಬ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ 'ಬ್ರಹ್ಮಕಮಲ' ಎನ್ನುವ ಹೆಸರು ಬಂದಿದೆ.