'ನಿಮಗಾದ ಸಂತೋಷ ನನಗೆ ಆಗಿದೆ': ಮುಹಮ್ಮದ್ ಕುಂಞಿ
ಮಂಗಳೂರು, ಡಿಸೆಂಬರ್, 22 : 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಿ ಅವರು ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ.
ಪ್ರಶಸ್ತಿ ಸಿಕ್ಕಿದ ಬಗ್ಗೆ ನಿಮ್ಮ 'ಒನ್ ಇಂಡಿಯಾ' ಬೊಳುವಾರು ಮುಹಮ್ಮದ್ ಕುಂಞಿ ಅವರನ್ನ ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ 'ನಿಮಗೆ ಎಷ್ಟು ಸಂತೋಷ ಆಗಿದೆಯೋ ಅಷ್ಟೇ ನನಗೂ ಸಂತೋಷ ಆಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.
ಬೊಳುವಾರು ಇವರ 'ಸ್ವಾತಂತ್ರ್ಯದ ಓಟ' ಎಂಬ ದೀರ್ಘ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನ ಬರುವ ಫೆಬ್ರವರಿಯಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬೊಳುವಾರು ರವರಿಗೆ ವಿತರಿಸಲಾಗುವುದು.[ಬೊಳುವಾರು ಮಹಮ್ಮದ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]
1951 ರ ಅಕ್ಟೋಬರ್ 21 ರಂದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಜನಿಸಿದ ಬೊಳುವಾರು ಸಿಂಡಿಕೇಟ್ ಬ್ಯಾಂಕ್ ನಲ್ಲಿ 1972ರ ಡಿಸೆಂಬರ್ ನಿಂದ 2011ರ ಅಕ್ಟೋಬರ್ ರವರೆಗೆ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಪ್ರವೃತ್ತಿ ಸಾಹಿತ್ಯದಲ್ಲಿತ್ತು. ' ತಟ್ಟು ಚಪ್ಪಾಳೆ ಪುಟ್ಟ ಮಗು', 'ಶಾಂತಮ್ಮನ್ನ', 'ಪಾಪು ಗಾಂಧಿ ಬಾಪು ಗಾಂಧಿ ಆದ ಕತೆ', 'ಒಂದು ತುಂಡು ಗೋಡೆ', 'ಓದಿರಿ' ಇವರ ಪ್ರಮುಖ ಕೃತಿಗಳಾಗಿವೆ
ಇವರ ಸಹೋದರ ಐ.ಕೆ. ಬೊಳುವಾರು ಖ್ಯಾತ ರಂಗ ಕಲಾವಿದರು. ಈಗ ಬೊಳುವಾರು ಮುಹಮ್ಮದ್ ಬೆಂಗಳೂರಲ್ಲಿ ನೆಲೆಸಿದ್ದಾರೆ.