ಬೆಂಗಳೂರಿನ ವಿದ್ಯಾರ್ಥಿ ಬೆಳ್ತಂಗಡಿಯ ಕೆರೆಯಲ್ಲಿ ಶವವಾಗಿ ಪತ್ತೆ!
ಮಂಗಳೂರು, ಜುಲೈ.26: ಬೆಳ್ತಂಗಡಿಯ ಗುರುವಾಯನ ಕೆರೆಯಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ. ನಿನ್ನೆ ಬುಧವಾರ(ಜು.25) ಸಂಜೆ ಕೆರೆಯ ದಡದಲ್ಲಿ ವಿದ್ಯಾರ್ಥಿ ಬ್ಯಾಗ್ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಗುರುವಾರ ಕೆರೆಯಲ್ಲಿ ವಿದ್ಯಾರ್ಥಿಯ ಮೃತದೇಹ ಕಾಣಿಸಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ಈ ಗುರುವಾಯನಕೆರೆ ಇದೆ. ಮೃತ ವಿದ್ಯಾರ್ಥಿಯನ್ನು ಯಶವಂತ್ ಸಾಯಿ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಐಟಿಐ ವಿದ್ಯಾಮಂದಿರ ಹೈಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿ ಎಂದು ಹೇಳಲಾಗಿದೆ.
ಹಾಸನ: ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ
ಸಂಜೆ ಕೆರೆ ಗುರುವಾಯನಕೆರೆಯ ದಡದಲ್ಲಿ ವಿದ್ಯಾರ್ಥಿ ಬ್ಯಾಗ್ ಪತ್ತೆಯಾಗಿತ್ತು. ಸಂಶಯಗೊಂಡ ಸ್ಥಳೀಯರು, ಅಗ್ನಿಶಾಮಕದಳದ ಸಿಬ್ಬಂದಿಗಳು ವಿದ್ಯಾರ್ಥಿಯ ಹುಡುಕಾಟ ನಡೆಸಿದ್ದರು.
ಕೆರೆಯ ದಡದಲ್ಲಿ ದೊರೆತಿದ್ದ ಬ್ಯಾಗ್ ನಲ್ಲಿ ವಿದ್ಯಾರ್ಥಿಯ ಶಾಲೆ ಐಡಿ ಕಾರ್ಡ್, ಆಧಾರ್ ಕಾರ್ಡ್, ಬೆಂಗಳೂರಿನಿಂದ ಮಂಗಳೂರಿಗೆ ಬಂದಿರುವ ಬಸ್ ಟಿಕೆಟ್ ಕೂಡ ಪತ್ತೆಯಾಗಿತ್ತು.
ಆದರೆ ಬೆಂಗಳೂರಿನ ವಿದ್ಯಾರ್ಥಿ ಇಲ್ಲಿಗೆ ಬಂದಿದ್ದಾದರೂ ಏಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.