ಬಿಜೆಪಿ ಕರೆ ನೀಡಿರುವ ಬಂದ್ ರಾಜಕೀಯ ಗಿಮಿಕ್: ಯು.ಟಿ. ಖಾದರ್
ಮಂಗಳೂರು, ಮೇ 26: ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್ ರಾಜಕೀಯ ಗಿಮಿಕ್ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಚಿವ ಸಂಪುಟವೇ ರಚನೆ ಆಗದೆ, ಚರ್ಚೆಯೇ ನಡೆಯದೆ, ಏಕಾಏಕಿ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಎಂದು ಒತ್ತಾಯಿಸುವುದು ಬಿಜೆಪಿಗೆ ಶೋಭೆ ತರುವಂತದ್ದಲ್ಲ," ಎಂದು ಕಿಡಿಕಾರಿದರು.
ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್: ಯಡಿಯೂರಪ್ಪ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸೋಮವಾರ ಕರೆ ನೀಡಿರುವ ರಾಜ್ಯ ಬಂದ್ ರಾಜಕೀಯ ಪ್ರೇರಿತ ಹೇಳಿಕೆ ಎಂದು ಅವರು ಅಭಿಪ್ರಾಯ ಪಟ್ಟರು. ನೂತನ ಸಮಿಶ್ರ ಸರಕಾರದ ಸಚಿವ ಸಂಪುಟ ರಚನೆ ಆದ ಬಳಿಕ ಸಚಿವ ಸಂಪುಟ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದರು.
"ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಸಚಿವ ಸ್ಥಾನದ ವಿಷಯದಲ್ಲಿ ಜೆಡಿಎಸ್ ಮುಖಂಡ ಬಿ.ಎಂ. ಫಾರೂಕ್ ಹಾಗೂ ನನ್ನ ನಡುವೆ ಯಾವುದೇ ರೀತಿಯಲ್ಲಿ ಪೈಪೋಟಿ ಇಲ್ಲ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಬಿ.ಎಂ.ಫಾರುಕ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ನಮ್ಮ ನಡುವೆ ಸಚಿವ ಸ್ಥಾನಕ್ಕಾಗಿ ಯಾವುದೇ ಸ್ಪರ್ಧೆ ನಡೆದಿಲ್ಲ," ಎಂದು ಅವರು ಸ್ಪಷ್ಟಪಡಿಸಿದರು.
ಆಕ್ರೋಶದ ಬದಲು ನಗೆಯುಕ್ಕಿಸಿದ ಯಡಿಯೂರಪ್ಪ ಮಾತುಗಳು
ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು ಐದು ವರ್ಷಗಳ ಕಾಲ ಸ್ಥಿರ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, "ಯಾವುದೇ ಭಿನ್ನಾಭಿಪ್ರಾಯ ಎರಡೂ ಪಕ್ಷದಲ್ಲಿ ಇಲ್ಲ ," ಎಂದು ತಿಳಿಸಿದರು.