ಬಿಜೆಪಿಯ 'ಮಂಗಳೂರು ಚಲೋ' ಜನಸುರಕ್ಷಾ ಯಾತ್ರೆಯ ಸಂಪೂರ್ಣ ವಿವರ
ಮಂಗಳೂರು, ಮಾರ್ಚ್ 1: ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ವಿರೋಧಿಸಿ ಬಿಜೆಪಿ ಕೈಗೊಂಡಿದ್ದ ಬೃಹತ್ ಜನರಕ್ಷಾ ಯಾತ್ರೆಯ ಮಾದರಿಯಲ್ಲೇ ರಾಜ್ಯದ ಕರಾವಳಿಯಲ್ಲಿ ಬೃಹತ್ ಪಾದಯಾತ್ರೆ ನಡೆಸಲು ಬಿಜೆಪಿ ಸಜ್ಜಾಗಿದೆ.
ನಾಡ ಜನರ ರಕ್ಷಣೆಗಾಗಿ ಜನಸುರಕ್ಷಾ ಯಾತ್ರೆ 'ಮಂಗಳೂರು ಚಲೋ' ಹಮ್ಮಿಕೊಳ್ಳುತ್ತಿರುವುದಾಗಿ ಬಿಜೆಪಿ ಹೇಳಿದೆ. ಇದೇ ಮಾರ್ಚ್ 3 ರಿಂದ 6ರ ವರೆಗೆ ಈ ಯಾತ್ರೆ ರಾಜ್ಯದ ಕರಾವಳಿಯಲ್ಲಿ ನಡೆಯಲಿದೆ.
ಕೊಡಗಿನ ಕುಶಾಲನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಭಾಗದಿಂದ ಯಾತ್ರೆಗಳಿಗೆ ಮಾರ್ಚ್ 3 ರಂದು ಮುಂಜಾನೆ ಚಾಲನೆ ದೊರಕಲಿದೆ. ಕುಶಾಲನಗರದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಯಾತ್ರೆಗೆ ಚಾಲನೆ ನೀಡಿದರೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸದಾನಂದ ಗೌಡ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
ಮಾರ್ಚ್ 3 ರಂದು ಕುಶಾಲನಗರ ಹಾಗು ಅಂಕೋಲಾ ದಿಂದ ಹೊರಡುವ ಜನಸುರಕ್ಷಾ ಯಾತ್ರೆ ಮಂಗಳೂರಲ್ಲಿ ಮಾರ್ಚ್ 6 ರಂದು ಸಮಾಪನಗೊಳ್ಳಲಿದೆ. ಕುಶಾಲನಗರದಿಂದ ಹೊರಡುವ ಯಾತ್ರೆಯ ನೇತೃತ್ವವನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ವಹಿಸಲಿದ್ದಾರೆ. ಅದೇ ರೀತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಿಂದ ಹೊರಡುವ ಯಾತ್ರೆಯ ನೇತೃತ್ವವನ್ನು ಸಂಸದರಾದ ಅನಂತ ಕುಮಾರ್ ಹೆಗಡೆ ಹಾಗೂ ಶೋಭಾ ಕರಂದ್ಲಾಜೆ ವಹಿಸಲಿದ್ದಾರೆ.
ಅಂಕೋಲಾ ದಿಂದ ಹೊರಡುವ ಯಾತ್ರೆ ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಕಾಪು, ಬೈಕಂಪಾಡಿ ಮಾರ್ಗವಾಗಿ ಮಂಗಳೂರು ತಲುಪಲಿದೆ. ಕುಶಾಲನಗರದಿಂದ ಹೊರಡುವ ಯಾತ್ರೆ ಮಡಿಕೇರಿ, ಸುಳ್ಯ, ಪುತ್ತೂರು, ಮಾಣಿ, ಬಿ.ಸಿ.ರೋಡ್, ಮೂಡಬಿದ್ರೆ ಮಾರ್ಗವಾಗಿ ಮಂಗಳೂರು ತಲುಪಲಿದೆ.
ಮಾರ್ಚ್ 6 ರಂದು ಮಂಗಳೂರಿನ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಹಾಗೂ ಪಂಪ್ ವೆಲ್ ನಿಂದ ಪಾದಯಾತ್ರೆ ನಡೆಯಲಿದ್ದು ನಗರದ ಕೇಂದ್ರ ಮೈದಾನದಲ್ಲಿ ಪಾದಯಾತ್ರೆ ಸಂಪನ್ನಗೊಳ್ಳಲಿದೆ. ಕೇಂದ್ರ ಮೈದಾನದಲ್ಲಿ ನಡೆಯಲಿರುವ ಜನಸುರಕ್ಷಾ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.
'ಒಂದು ದೇಶ, ಒಂದು ಚುನಾವಣೆ' ಹೊಸ ಪರಿಕಲ್ಪನೆಗೆ ಬಿಜೆಪಿ ಬದ್ಧ!
ಮಂಗಳೂರಿನ ಆ ಉದ್ಯಮಿ ಕಾರಲ್ಲೇ ಅಮಿತ್ ಶಾ ಕರಾವಳಿ ಪ್ರವಾಸ ಮಾಡಿದ್ದೇಕೆ?