ಟಿಪ್ಪು ಒಬ್ಬ ಆಕ್ರಮಣಕಾರಿ, ಅತ್ಯಾಚಾರಿ, ಮತಾಂತರಿ: ಕಟೀಲ್
ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪಕ್ಷ ಮಂಗಳವಾರ ಮಂಗಳೂರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು, ನವೆಂಬರ್. 08 : ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, 'ಟಿಪ್ಪು ಒಬ್ಬ ಆಕ್ರಮಣಕಾರಿ, ಅತ್ಯಾಚಾರಿ, ಮತಾಂತರಿ ಎಂದ ಅವರು, ಇಸ್ಲಾಂ ಧರ್ಮದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ. ಹಾಗೇನಾದರೂ ವ್ಯಕ್ತಿ ಪೂಜೆ ಮಾಡಿದರೆ ಅವರನ್ನು ಕಾಫಿರ್ ಅಥವಾ ಧರ್ಮದ್ರೋಹಿ ಅನ್ನುತ್ತಾರೆ.
ಬರೀ ವೋಟ್ ಬ್ಯಾಂಕ್ ರಾಜಕಾರಾಣಕ್ಕಾಗಿ ಟಿಪ್ಪು ಜಯಂತಿ ಆಚರಿಸುವ ಮೂಲಕ ಇಸ್ಲಾಂ ಧರ್ಮಕ್ಕೂ ಸಿದ್ದರಾಮಯ್ಯ ಅನ್ಯಾಯ ಮಾಡುತ್ತಿದ್ದಾರೆ. ಟಿಪ್ಪು ಭಯೋತ್ಪಾದಕ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಸಿದ್ದರಾಮಯ್ಯ ಮಾತ್ರ ಭಯೋತ್ಪಾದಕ ಸದ್ದಾಂ ಸುಲ್ತಾನ್" ಎಂದು ಅವರನ್ನು ಲೇವಡಿ ಮಾಡಿದರು. [ಟಿಪ್ಪು ಜಯಂತಿ ಬಗ್ಗೆ ಸಿಎಂ ವಿವೇಚನೆಯಿಂದ ವರ್ತಿಸಲಿ: ನಳಿನ್]
ಜನರ ಭಾವನೆಗಳನ್ನು ಧಿಕ್ಕರಿಸಿ ಟಿಪ್ಪು ಜಯಂತಿ ಆಚರಿಸಲು ಮುಂದಾದರೆ ಅದರಿಂದಾಗುವ ಅನಾಹುತಕ್ಕೆ ಮುಖ್ಯಮಂತ್ರಿಯವರೇ ಕಾರಣ ಎಂದು ನಳಿನ್ ಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಿದ್ಧರಾಮಯ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಹೊರಟಿದೆ, ಟಿಪ್ಪು ಜಯಂತಿ ಆಚರಣೆಗೆ ತಡೆಯಾಗದಂತೆ ಪೊಲೀಸರು ಬಾಂಡ್ ಪಡೆದುಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಬಾಂಡ್ ಸ್ವೀಕರಿಸಬೇಕಾದದ್ದು ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸದಸ್ಯರಿಂದ.
ರಾಜ್ಯದಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಐಎಸ್ಐ ಪ್ರೇರಿತ ಶಕ್ತಿಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ ಎಂದರು.
ಸಿದ್ದರಾಮಯ್ಯ ಎಚ್ಚೆತ್ತುಕೊಂಡು ತನ್ನ ಭಯೋತ್ಪಾದಕ ಮನೋಭಾವನೆಗಳನ್ನು ತಿದ್ದಿಕೊಳ್ಳಬೇಕು ಮತ್ತು ಟಿಪ್ಪು ಜಯಂತಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.