ಜಿಲ್ಲೆಯ ಬಿಜೆಪಿ ಶಾಸಕರು ನನ್ನ ವೈರಿಗಳಲ್ಲ ಮಿತ್ರರು: ಯುಟಿ ಖಾದರ್
ಮಂಗಳೂರು, ಜೂನ್ 10: ರಾಜ್ಯದ ನೂತನ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರಿಗೆ ಆಗಮಿಸಿದ ಸಚಿವ ಯು.ಟಿ.ಖಾದರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಭಾರೀ ಸ್ವಾಗತ ನೀಡಿದರು.
ಮಂಗಳೂರಿಗೆ ಶನಿವಾರ ಆಗಮಿಸಿದ ಖಾದರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಭರ್ಜರಿಯಾಗಿ ಬರಮಾಡಿಕೊಂಡರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯು.ಟಿ ಖಾದರ್, "ದಕ್ಷಿಣ ಕನ್ನಡದಲ್ಲಿ 7 ಬಿಜೆಪಿ ಶಾಸಕರಿದ್ದಾರೆ ಅವರು ನನ್ನ ವೈರಿಗಳಲ್ಲ; ಮಿತ್ರರು. ನಾವೆಲ್ಲಾ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ," ಎಂದು ಹೇಳಿದರು.
"ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ ಅವರಾರು ವೈರಿಗಳಲ್ಲ. ನನ್ನ ಮಿತ್ರರೇ. ಹಾಗಾಗಿ ನಾನು ಬಿಜೆಪಿ ಶಾಸಕರ ಜತೆ ಸೇರಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತೇನೆ," ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನನಗೆ ನೀಡಿದರೆ ನಾವೆಲ್ಲ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ನೀಡುವ ಕುರಿತು ಈವರೆಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಜನಪರ ಕಾರ್ಯಗಳನ್ನು ನಡೆಸುವ ಹೊಣೆಗಾರಿಕೆಯ ಜವಾಬ್ದಾರಿ ನನಗೆ ಸಿಕ್ಕಿದೆ. ಹಿರಿಯರ ಸಲಹೆ ಪಡೆದು ಕೆಲಸ ನಿರ್ವಹಿಸುತ್ತೇನೆ. ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪುವಂತೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ಯತ್ನಾಳ್ ಹೇಳಿಕೆ ಅಸಾಂವಿಧಾನಿಕ, ಅನಾಗರೀಕವಾದದು ಎಂದು ಕಿಡಿಕಾರಿದರು. ಚುನಾವಣೆಯಲ್ಲಿ ಗೆದ್ದ ಕೂಡಲೇ ಯಾರು ಶಾಸಕರಾಗಿರುವುದಿಲ್ಲ. ವಿಧಾನಸಭೆಯಲ್ಲಿ ಸ್ಥಾನಗಳನ್ನು ಸ್ಪೀಕರ್ ಮುಂದೆ ಪ್ರತಿಜ್ಞೆ ಸ್ವೀಕರಿಸಿದ ನಂತರ ಶಾಸಕರಾಗುವುದು. ಆ ಸಂದರ್ಭದಲ್ಲಿ ಯಾರಿಗೂ ತಾರತಮ್ಯ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಲಾಗುತ್ತದೆ. ಆದರೆ ಶಾಸಕರಾದ ನಂತರ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.