ಬಿಜೆಪಿಯ ಹಿಂದೂಗಳ ಸಂಸ್ಕೃತಿ ಅನಾವರಣಗೊಳ್ಳುತ್ತಿದೆ: ಪ್ರತಿಭಾ ಕುಳಾಯಿ
ಮಂಗಳೂರು, ಏಪ್ರಿಲ್ 29: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯ ಹಿಂದೂಗಳು ನನ್ನ ವಿರುದ್ಧ ಅವಹೇಳನಕಾರಿ ಕಮೆಂಟ್ ಗಳನ್ನು ಹಾಕಿ ಅವರ ಸಂಸ್ಕೃತಿ ಅನಾವರಣಗೊಳಿಸುತ್ತಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಗೋವುಗಳೊಂದಿಗೆ ಫೋಟೋ ಕ್ಲಿಕ್ಕಿಸಿ ಫೇಸ್ಬುಕ್ ನಲ್ಲಿ ಹಾಕಿದರೆ, ಅದಕ್ಕೆ ಕೆಲ ಬಿಜೆಪಿ ಹಿಂದೂಗಳು ನನ್ನ ವಿರುದ್ಧ ಅವಹೇಳಕಾರಿ ಕಮೆಂಟ್ ಹಾಕಿದ್ದಾರೆ," ಎಂದು ದೂರಿದರು.
ಪ್ರತಿಭಾ ಕುಳಾಯಿ ವಿರುದ್ಧ ನೋಟಿಸ್ ಜಾರಿ ಮಾಡಿದ ದಕ್ಷಿಣ ಕನ್ನಡ ಕಾಂಗ್ರೆಸ್
ನನ್ನನ್ನು ಗೋಹತ್ಯೆ ಮಾಡುವವಳು ಎಂದು ಟೀಕಿಸಿದ್ದಾರೆ. ಆದರೆ ನಾನು ಗೋವನ್ನು ಪೂಜಿಸುತ್ತೇನೆ . ಬಿಜೆಪಿಯವರಿಂದ ಈ ರೀತಿಯ ಕಮೆಂಟ್ ಬಂದಿದೆ. ನಾನು ಹಾಕಿದ ಬಟ್ಟೆ ಬಗ್ಗೆನೂ ಕಮೆಂಟ್ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
"ಬುರ್ಖಾ ಕಳೆದು ಹೋಗಿದೆಯೇ? ಎಂದು ಕಮೆಂಟ್ ಮಾಡುತ್ತಾರೆ. ಯಾರು ಯಾವ ಬಟ್ಟೆ ತೊಡಬೇಕು, ಯಾವುದರ ಜೊತೆ ಫೋಟೋ ತೆಗೆಯಬೇಕು ಎಂದು ಬಿಜೆಪಿಯವರು ನಿರ್ಧರಿಸುತ್ತಿದ್ದಾರೆ," ಎಂದು ಅವರು ಕಿಡಿಕಾರಿದರು.
ಸಮಾಜದ್ರೋಹಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ ಅವರು, "ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಾನು ಕಾರ್ಕಳದಲ್ಲಿ ನೀಡಿದ್ದ, 'ಸಾಯಲು ಮನಸ್ಸಿದ್ದರೆ, ಜೈಲು ವಾಸ ಮಾಡ ಬೇಕಾದರೆ ಆರೆಸ್ಸೆಸ್ ಸೇರಿ' ಎನ್ನುವ ಹೇಳಿಕೆಯನ್ನೇ ಈಗ ಹಿಂದೂ ಸಂಘಟನೆಯ ಕಾರ್ಯಕರ್ತರು ಹೇಳುತ್ತಿದ್ದಾರೆ," ಎಂದು ಅವರು ತಿಳಿಸಿದರು.