ಸಾಮರಸ್ಯಕ್ಕೆ ಧಕ್ಕೆ ತಂದವರಿಂದಲೇ ಜನಸುರಕ್ಷಾ ಯಾತ್ರೆ: ರಮಾನಾಥ ರೈ ವ್ಯಂಗ್ಯ
ಮಂಗಳೂರು, ಮಾರ್ಚ್ 5: ಜನಸುರಕ್ಷಾ ಯಾತ್ರೆ ಕೈಗೊಳ್ಳಲು ಬಿಜೆಪಿಗೆ ಯೋಗ್ಯತೆಯಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ್ ರೈ ಕಿಡಿಕಾರಿದರು. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ಧಕ್ಕೆ ತಂದವರೇ ಈಗ ಯಾತ್ರೆ ಕೈಗೊಂಡಿದ್ದಾರೆ ಇದು ವಿಪರ್ಯಾಸ ಎಂದು ವ್ಯಂಗ್ಯವಾಡಿದರು.
"ಇತರ ಮತೀಯ ಸಂಘಟನೆಗಳಂತೆ ಬಿಜೆಪಿ ಕೂಡಾ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಿದೆ. ಯಾವುದೇ ಹತ್ಯೆ, ಹಿಂಸಾಚಾರದಲ್ಲಿ ಕಾಂಗ್ರೆಸ್ ಪಾತ್ರವಿಲ್ಲ," ಎಂದು ಹೇಳಿದ ಅವರು, "ಹಿಂದೂ ರಕ್ಷಕರೆನ್ನುವ ಬಿಜೆಪಿಯವರು ಹಿಂದೂಗಳನ್ನೇ ಹತ್ಯೆ ಕೂಡ ಮಾಡಿದ್ದಾರೆ," ಎಂದು ಆರೋಪಿಸಿದರು.
ವಿನಾಯಕ ಬಾಳಿಗ, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ ಹತ್ಯೆ ಮಾಡಿದವರು ಯಾರು? ಎಂದು ಪ್ರಶ್ನಿಸಿದ ಅವರು, ಕಾರ್ತಿಕ್ ರಾಜ್ ಹತ್ಯೆ ಪ್ರಕರಣದಲ್ಲೂ ಬಿಜೆಪಿಯವರೇ ಪ್ರಚೋದನೆ ನೀಡಿದ್ದರು ಎಂದು ದೂರಿದರು.
"ಬಿಜೆಪಿಯವರೇ ತಪ್ಪು ಮಾಡಿ ಈಗ ಯಾವ ಮುಖದಲ್ಲಿ ಜನಸುರಕ್ಷಾ ಯಾತ್ರೆ ಮಾಡುತ್ತಿದ್ದಾರೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು. "ನನ್ನ ಕ್ಷೇತ್ರದಲ್ಲಿ ನಡೆದ 5 ಹತ್ಯೆಗಳ ಪೈಕಿ 4 ಹತ್ಯೆಗಳನ್ನು ಸಂಘ ಪರಿವಾರವೇ ಮಾಡಿದೆ," ಎಂದು ಅವರು ದೂರಿದರು.
"ಬಿಜೆಪಿ ಜನಸುರಕ್ಷಾ ಯಾತ್ರೆ ನಡೆಸುವ ಉದ್ದೇಶ ಏನು? ಗಲಭೆ ಮಾಡುವ ಉದ್ದೇಶವೇ? ಅಥವಾ ಶಾಂತಿಯ ಉದ್ದೇಶವೇ? ಎಂದು ಪ್ರಶಿಸಿದ ಅವರು ಸಂಘಪರಿವಾರದ ಮುಖಂಡರುಗಳೇ ಹತ್ಯೆಗಳನ್ನು ಸಮರ್ಥಿಸುತ್ತಾರೆ. ಜನಸುರಕ್ಷಾ ಯಾತ್ರೆ ಮೂಲಕ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ," ಎಂದು ಅವರು ಆರೋಪಿಸಿದರು.
"ಸಂಸದ ಪ್ರತಾಪ್ ಸಿಂಹ ಅಶಾಂತಿಗೆ ತುಪ್ಪ ಸುರಿಯುತ್ತಿದ್ದಾರೆ," ಎಂದು ಆರೋಪಿಸಿದ ಅವರು "ಬಿಜೆಪಿಯವರ ಯಾತ್ರೆ ಉದ್ದೇಶ ಘರ್ಷಣೆ ಸೃಷ್ಟಿಸುವುದು," ಎಂದು ಅವರು ಕಿಡಿಕಾರಿದರು.