ನೈಋತ್ಯ ಶಿಕ್ಷಕರ ಕ್ಷೇತ್ರ: ಬಿಜೆಪಿ ಪಾರುಪತ್ಯ ಅಂತ್ಯ
ಮಂಗಳೂರು ಜೂನ್ 13: ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಸಾಧಿಸಿದ್ದ ಬಿಜೆಪಿ ಅಧಿಪತ್ಯ ಅಂತ್ಯಗೊಂಡಿದೆ.
ವಿಧಾನ ಪರಿಷತ್ ನ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಗಣೇಶ ಕಾರ್ಣಿಕ್ ಪರಾಜಯಗೊಳ್ಳುವ ಮೂಲಕ ಬಿಜೆಪಿ ಹಿಡಿತದಲ್ಲಿದ್ದ ಶಿಕ್ಷಕರ ಕ್ಷೇತ್ರವನ್ನು ಕಳೆದುಕೊಂಡಂತಾಗಿದೆ.
ಪರಿಷತ್ ಚುನಾವಣೆ: ಕಾಂಗ್ರೆಸ್ 1, ಜೆಡಿಎಸ್ 2, ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು
ಈ ಕ್ಷೇತ್ರದಿಂದ ಪ್ರಥಮ ಬಾರಿಗೆ ಜೆಡಿಎಸ್ ವಿಧಾನ ಪರಿಷತ್ ಗೆ ಪ್ರವೇಶ ಪಡೆದಿದೆ. ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಬೋಜೆಗೌಡ ಚುನಾವಣೆಯಲ್ಲಿ ಜಯ ಸಾಧಿಸುವುದರೊಂದಿಗೆ ಪ್ರಥಮ ಬಾರಿಗೆ ಈ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಪ್ರವೇಶ ಪಡೆದಿದ್ದಾರೆ.
ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ. ಶಿವಮೊಗ್ಗದ ಪದ್ಮಾವತಿ ವಿಠಲ್ ರಾವ್ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕೃಷ್ಣ ಭಟ್ 2 ಬಾರಿ ಕ್ಷೇತ್ರವನ್ನು ವಿಧಾನ ಪರಿಷತ್ ನಲ್ಲಿ ಪ್ರತಿನಿಧಿಸಿದ್ದರು.
ನೈಋತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ದಕ್ಷಿಣ ಕನ್ನಡ , ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗು ಹೊನ್ನಳ್ಳಿ ತಾಲೂಕುಗಳು ಬರುತ್ತವೆ. 30 ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರವನ್ನು ಕಳೆದ 2 ಅವಧಿಗಳಿಂದ ಕ್ಯಾ. ಗಣೇಶ್ ಕಾರ್ಣಿಕ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಈ ಮೂರನೇ ಅವಧಿಗೂ ಬಿಜೆಪಿ ಗಣೇಶ್ ಕಾರ್ಣಿಕ್ ಅವರನ್ನು ಕಣಕ್ಕಿಳಿಸಿತ್ತು. ಆದರೆ ಚುನಾವಣೆಯಲ್ಲಿ ಜೆಡಿಎಸ್ ನ ಆಭ್ಯರ್ಥಿ ಭೋಜೆ ಗೌಡ ಎದುರು ಸೋಲು ಅನುಭವಿಸುವ ಮೂಲಕ ಹ್ಯಾಟ್ರಿಕ್ ಸಾಧಿಸುವ ಕಾರ್ಣಿಕ್ ಅವರ ಕನಸು ಭಗ್ನಗೊಂಡಿದೆ.