ಬಿಜೆಪಿ ಟಿಕೆಟ್ ಘೋಷಣೆ ಮುನ್ನವೇ ಪುತ್ತೂರಿನಲ್ಲಿ ಬಂಡಾಯದ ಹೊಗೆ
ಮಂಗಳೂರು, ಏಪ್ರಿಲ್ 11: ದಕ್ಷಿಣ ಕನ್ನಡ ಜಿಲ್ಲೆಯ ಪತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆಗೆ ಮುನ್ನವೇ ಕಮಲ ಪಾಳಯದಲ್ಲಿ ಗೊಂದಲ ಸೃಷ್ಠಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಗಾಗಿ ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಈ ನಡುವೆ ಪ್ರತಿಸ್ಪರ್ಧಿ ಕೇಂದ್ರ ಸಚಿವ ಡಿ .ವಿ .ಸದಾನಂದ ಗೌಡ ಆಪ್ತ ಅಶೋಕ್ ರೈ ಕೋಡಿಂಬಾಡಿ ಟಿಕೆಟ್ ಗಾಗಿ ಭಾರೀ ಲಾಬಿ ನಡೆಸಿದ್ದಾರೆ.
ಸಂಜೀವ ಮಠಂದೂರು ಅವರ ಹೆಸರು ಪುತ್ತೂರು ಕ್ಷೇತ್ರದ ಟಿಕೆಟ್ ಗೆ ಅಂತಿಮವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ . ಈ ಹಿನ್ನೆಲೆಯಲ್ಲಿ ಪುತ್ತೂರು ಕ್ಷೇತ್ರದ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಟಿಕೆಟ್ ನ ಪ್ರಬಲ ಆಕಾಂಕ್ಷಿ ಅಶೋಕ್ ರೈ ಅವರ ಬೆಂಬಲಿಗರು ಖುದ್ದು ಸಭೆ ಸೇರಿ ಸಂಜೀವ ಮಠಂದೂರು ಅವರಿಗೆ ಟಿಕೆಟ್ ನೀಡರುವುದಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಕ್ಷೇತ್ರದಿಂದ ಸ್ಪರ್ಧಿಸಲು ಸಂಜೀವ ಮಠಂದೂರು ಅವರಿಗೆ ಟಿಕೆಟ್ ಅಂತಿಮ ವಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಅಸಮಾಧಾನ ಸ್ಪೋಟಿಸಿದ್ದು ಅಶೋಕ್ ರೈ ಅವರ ಬೆಂಬಲಿಗರು ಹಲವು ಗ್ರಾಮಗಳಲ್ಲಿ ಪೇಜ್ ಪ್ರಮುಖ ಹುದ್ದೆಯಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ. ಪಕ್ಷದ ಪ್ರಚಾರ ಕಾರ್ಯದಿಂದ ಅಶೋಕ್ ರೈ ಬೆಂಬಲಿಗರು ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಗಳೂ ಹರಿದಾಡುತ್ತಿವೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಪೆರುವಾಯಿ , ವಿಟ್ಲ, ಬಿಳಿಯೂರು , ಸರ್ವೆ , ಆರ್ಯಾಪು , ಮೊಟ್ಟೆತ್ತಟ್ಕ , ಕಮ್ಮಿಂಜೆ , ಕುರಿಯಾ ಗ್ರಾಮದ ಪೇಜ್ ಪ್ರಮುಖ ಹಾಗು ಕಾರ್ಯಕರ್ತರು ಅಶೋಕ್ ರೈ ಅವರಿಗೆ ಬೆಂಬಲ ಸೂಚಿಸಿ ಬಿಜೆಪಿ ಪ್ರಚಾರ ಕಾರ್ಯದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗಿದೆ. ಪುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಬಿಜೆಪಿ ವರಿಷ್ಠರ ನಿದ್ದೆಗೆಡಿಸಿದೆ.