ಬಿಜೆಪಿಗೆ ಮಂಗಳೂರಿನ 3 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು
ಮಂಗಳೂರು ಏಪ್ರಿಲ್ 17: ಮುಂಬರುವ ವಿಧಾನ ಸಭಾ ಚುನಾವಣೆಗೆ ಬಿಜೆಪಿ ತನ್ನ ಆಭ್ಯರ್ಥಿಗಳ 2 ನೇ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ. ಎರಡೂ ಪಟ್ಟಿಗಳು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.
ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಸೋಮವಾರ ಘೋಷಿಸಿದ್ದು, ಸುಳ್ಯ ಕ್ಷೇತ್ರದ ಅಭ್ಯರ್ಥಿ ಅಂಗಾರ ಅವರ ಹೆಸರನ್ನು ಮೊದಲ ಪಟ್ಟಿಯಲ್ಲೇ ಘೋಷಿಸಲಾಗಿತ್ತು.
ಮಿಥುನ್ ರೈಗಿಲ್ಲ ಮೂಡಬಿದಿರೆ ಟಿಕೆಟ್, ಅಭಯಚಂದ್ರ ಜೈನ್ ಹೇಳಿದ್ದೇನು?
ಆದರೆ ಮಂಗಳೂರು, ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಇನ್ನೂ ಕಗ್ಗಂಟಾಗಿಯೇ ಉಳಿದಿವೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬೆಳ್ತಂಗಡಿ ಕ್ಷೇತ್ರಕ್ಕೆ ಬಿಜೆಪಿ ಈ ಬಾರಿ ಹೊಸ ಮುಖವನ್ನು ಪರಿಚಯಿಸಿದೆ. ಈ ಕ್ಷೇತ್ರದಿಂದ ಬಿಜೆಪಿ ಯುವ ಮುಖಂಡ ಹರೀಶ್ ಪೂಂಜಾ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಬೆಳ್ತಂಗಡಿ ಹೊರತು ಪಡಿಸಿ ಬಂಟ್ವಾಳ, ಮೂಡಬಿದರೆ, ಪುತ್ತೂರು, ಸುಳ್ಯ ಕ್ಷೇತ್ರದಲ್ಲಿ ಹಳೆಮುಖಗಳಿಗೇ ಬಿಜೆಪಿ ಮಣೆ ಹಾಕಿದೆ.
ರಮಾನಾಥ ರೈ ವಿರುದ್ಧ ರಾಜೇಶ್ ನಾಯಕ್
ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಕುತೂಹಲ ಕೆರಳಿಸಿದ ಕ್ಷೇತ್ರ ಬಂಟ್ವಾಳ. ಇಲ್ಲಿ ಸಚಿವ ರಮಾನಾಥ್ ರೈ ವಿರುದ್ಧ ಬಿಜೆಪಿ ರಾಜೇಶ್ ನಾಯಕ್ ಅವರನ್ನು ಕಣಕ್ಕಿಳಿಸಿದೆ. 2013 ರಲ್ಲಿ ನಡೆದ ಚುನಾವಣೆಯಲ್ಲಿ ರಾಜೇಶ್ ನಾಯಕ್ ರಮಾನಾಥ್ ರೈ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ ಈ ಬಾರಿ ರಾಜೇಶ್ ನಾಯಕ್ ಮತ್ತೆ ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದು ಬಂಟ್ವಾಳ ಕ್ಷೇತ್ರದಿಂದ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.
ಅಭಯಚಂದ್ರ ಜೈನ್ ವಿರುದ್ಧ ಉಮಾನಾಥ್ ಕೋಟ್ಯಾನ್
ಜಿಲ್ಲೆಯಲ್ಲಿ ಜಿದ್ದಾಜಿದ್ದಿಯ ಕ್ಷೇತ್ರ ಮುಲ್ಕಿ-ಮೂಡಬಿದರೆ ಕ್ಷೇತ್ರ . ಈ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಬಿಜೆಪಿ ಉಮಾನಾಥ್ ಕೋಟ್ಯಾನ್ ಅವರನ್ನು ಕಣಕ್ಕಿಳಿಸಿದೆ. ಕಳೆದ 2013 ರಲ್ಲಿ ನಡೆದ ಚುನಾವಣೆಯಲ್ಲಿ ಉಮಾನಾಥ್ ಕೋಟ್ಯಾನ್ ಕಾಂಗ್ರೆಸ್ ನ ಅಭಯಚಂದ್ರ ಜೈನ್ ಅವರ ಎದುರು ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಆದರೆ ಈ ಬಾರಿ ಮತ್ತೆ ಬಿಜೆಪಿ ಉಮಾನಾಥ್ ಕೋಟ್ಯಾನ್ ಅವರ ಮೇಲೆ ಭರವಸೆ ಇಟ್ಟು ಟಿಕೆಟ್ ನೀಡಿದೆ.
ಶಕುಂತಾಳಾ ಶೆಟ್ಟಿ ವಿರುದ್ಧ ಸಂಜೀವ ಮಠಂದೂರು
ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿ ಅವರ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಬಿಜೆಪಿ ವರಿಷ್ಠರ ಈ ನಿರ್ಧಾರಕ್ಕೆ ಪುತ್ತೂರಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಕ್ಷೇತ್ರದಿಂದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಆಪ್ತ ಅಶೋಕ್ ಕುಮಾರ್ ರೈ ಹಾಗೂ ಯುವ ಮುಖಂಡ ಅರುಣ್ ಕುಮಾರ್ ಪುತ್ತಿಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅದರೆ ಬಿಜೆಪಿ ವರಿಷ್ಠರು ಸಂಜೀವ ಮಠಂದೂರು ಅವರಿಗೆ ಟಕೆಟ್ ನೀಡಿರುವ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ವರಿಷ್ಠರ ಅಯ್ಕೆಗೆ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು. ಪ್ರಚಾರದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ವಸಂತ ಬಂಗೇರ ವಿರುದ್ಧ ಹರೀಶ್ ಪೂಂಜ
ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ವಸಂತ ಬಂಗೇರಾ ಅವರ ವಿರುದ್ಧ ಬಿಜೆಪಿ ಈ ಬಾರಿ ಯುವ ಮುಖಂಡ ಹರೀಶ್ ಪೂಂಜಾ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಯೋಜನೆ ರೂಪಿಸಿದೆ.
ಬೆಳ್ತಂಗಡಿ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ರಂಜನ್ ಗೌಡ್ , ಪ್ರಭಾಕರ ಬಂಗೇರಾ, ಸಂಪತ್ ಸುವರ್ಣ, ಗಂಗಾಧರ ಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅದರೆ ಬಿಜೆಪಿ ವರಿಷ್ಠರು ಶಾಸಕ ವಸಂತ್ ಬಂಗೇರಾ ವಿರುದ್ಧ ಯುವ ನಾಯಕ ಹರೀಶ್ ಪೂಂಜಾ ಅವರನ್ನು ಕಣಕ್ಕಿಳಿಸಿದೆ. ಇದು ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಇಮ್ಮಡಿ ಗೊಳಿಸಿದೆ.
ಬಿಜೆಪಿ ವರಿಷ್ಠರಿಗೆ ಕಗ್ಗಂಟಾದ ಮೂರು ಕ್ಷೇತ್ರ
ಭಾರೀ ಕುತೂಹಲ ಕೆರಳಿಸಿರುವ ಮಂಗಳೂರು, ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳ ಅಯ್ಕೆ ಬಿಜೆಪಿ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಬಿಜೆಪಿಯ 2ನೇ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಇಲ್ಲದಿರುವುದು ಇದಕ್ಕೆ ಪುಷ್ಟಿ ನೀಡಿದೆ. ಈ ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ಇದೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ್ ಕಾಮತ್ ಮತ್ತು ಬದ್ರಿನಾಥ್ ಕಾಮತ್ ನಡುವೆ ಭಾರೀ ಪೈಪೋಟಿ ಇದೆ. (ಚಿತ್ರದಲ್ಲಿರುವವರು) ಇದಲ್ಲದೆ ಬ್ರಿಜೇಶ್ ಚೌಟ, ಎಸ್ ಗಣೇಶ್ ರಾವ್ , ನಾಲ್ಕು ಬಾರಿಯ ಶಾಸಕ ಯೋಗೀಶ್ ಭಟ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈ ನಡುವೆ ಯೋಗೀಶ್ ಭಟ್ ಅವರಿಗೆ ಟಿಕೆಟ್ ನಿಡಲಾಗಿದೆ ಎಂಬ ಮಾಹಿತಿ ನಿನ್ನೆ ಸಂಜೆ ಹೊರಬೀಳುತ್ತಿದ್ದಂತೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತ್ತು. ಯಾವುದೇ ಕಾರಣಕ್ಕೂ ಯೋಗಿಶ್ ಭಟ್ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯ ಕೇಳಿಬರುತ್ತಿದೆ.
ಒಂದು ವೇಳೆ ಯೋಗೀಶ್ ಭಟ್ ಅವರಿಗೆ ಟಿಕೆಟ್ ನೀಡಿದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರಚಾರ ಕಾರ್ಯದಿಂದ ದೂರ ಉಳಿಯಲು ತೀರ್ಮಾನಿಸಿದ್ದಾರೆ.
ಮಂಗಳೂರು ಉತ್ತರ: ಪಾಲೇಮಾರ್/ ಭರತ್ ಶೆಟ್ಟಿ?
ಅತ್ಯಂತ ಕುತೂಹಲ ಕೆರಳಿಸಿರುವ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಇನ್ನೂ ಆಗಿಲ್ಲ. ಇಲ್ಲಿ ಕಳೆದ ಬಾರಿ ಕಾಂಗ್ರೆಸ್ ನ ಮೊಯ್ದಿನ್ ಬಾವಾ ಎದುರು ಸೋತ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಈ ಬಾರಿಯೂ ಟಿಕೆಟ್ ಅಕಾಂಕ್ಷಿಯಾಗಿದ್ದಾರೆ. ಈ ಬಾರಿ ಅವರಿಗೆ ಸ್ಪರ್ಧಿಸಲು ಟಿಕೆಟ್ ದೊರಕುವುದು ಖಚಿತ ಎಂದು ಹೇಳಲಾಗುತ್ತಿತ್ತು . ಆದರೆ ಬಿಜೆಪಿ ಯುವ ಮುಖಂಡ ಡಾ. ಭರತ್ ಶೆಟ್ಟಿ ಪಾಲೇಮಾರ್ ಅವರಿಗೆ ಭಾರೀ ಪೈಪೋಟಿ ಒಡ್ಡಿದ್ದಾರೆ.
ಈ ನಡುವೆ ರಾಮಚಂದ್ರ ಬೈಕಂಪಾಡಿ, ಸತ್ಯಜಿತ್ ಸುರತ್ಕಲ್ ಸೇರಿದಂತೆ ಇನ್ನಿತರ ಟಕೆಟ್ ಅಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದಾರೆ. ಹೀಗಾಗಿ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದೆ.
ಮಂಗಳೂರು: ಸತೀಶ್ ಕುಂಪಲ/ ಸಂತೋಷ್ ಕುಮಾರ್ ರೈ/ ರಹೀಮ್ ಉಚ್ಚಿಲ್
ಇನ್ನೊಂದೆಡೆ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಸಚಿವ ಯು.ಟಿ. ಖಾದರ್ ಅವರ ವಿರುದ್ಧ ಯಾರನ್ನು ಕಣಕ್ಕಿಳಿಸುದು ಎಂಬುದೇ ಬಿಜೆಪಿ ನಾಯಕರಿಗೆ ತಲೆನೋವಾಗಿದೆ. ಕಾಂಗ್ರೆಸ್ಸಿನ ಖಾದರ್ ಕೈಯಲ್ಲಿರುವ ಈ ಕ್ಷೇತ್ರವನ್ನು ಕಸಿದುಕೊಳ್ಳಲು ಶತಾಯ ಗತಾಯ ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಆದರೆ ಅಭ್ಯರ್ಥಿ ಆಯ್ಕೆಗೆ ಪಕ್ಷಕ್ಕೆ ತಲೆನೋವಾಗಿದೆ.
ಈ ಕ್ಷೇತ್ರದಲ್ಲಿ ಜೆಡಿಎಸ್ ಮಾಜಿ ಮೇಯರ್ ಆಶ್ರಫ್ ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಗೆಲ್ಲುವ ತಂತ್ರಗಾರಿಕೆ ಹೆಣೆಯಲಾರಂಭಿಸಿದೆ. ಅದರೆ ಈ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯ ಹುಡುಕಾಟದಲ್ಲಿ ಬಿಜೆಪಿಯ ನಾಯಕರಿದ್ದಾರೆ. ಸದ್ಯ ಮೂವರು ಆಕಾಂಕ್ಷಿಗಳು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಪೈಕಿ ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್ ಅಥವಾ ರಹೀಮ್ ಉಚ್ಚಿಲ್ ಗೆ (ಚಿತ್ರದಲ್ಲಿರುವವರು) ಟಿಕೆಟ್ ಒಲಿಯಲಿದೆ ಎನ್ನಲಾಗಿದೆ.
ಇವರಲ್ಲದೆ ಚಂದ್ರಹಾಸ್ ಉಳ್ಳಾಲ್, ರವೀಂದ್ರ ಶೆಟ್ಟಿ ಕೂಡ ಟಿಕೆಟ್ ಬಯಸಿದ್ದಾರೆ.
ಸುಳ್ಯದಲ್ಲಿ ಅಂಗಾರ ಸ್ಪರ್ಧೆ
ಸುಳ್ಯದಲ್ಲಿ ಹಾಲಿ ಶಾಸಕ ಎಸ್. ಅಂಗಾರಗೆ ಬಿಜೆಪಿ ಟಿಕೆಟ್ ನೀಡಿದೆ. ಐದು ಬಾರಿ ಕ್ಷೇತ್ರದಲ್ಲಿ ಅಂಗಾರ ಗೆಲುವು ಸಾಧಿಸಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಗೆಲುವಿನ ಅಂತರ ಕಡಿಮೆಯಾಗುತ್ತಿರುವುದು ಬಿಜೆಪಿ ಪಾಲಿಗೆ ಎಚ್ಚರಿಕೆಯ ಗಂಟೆ.
2004ರಲ್ಲಿ 17 ಸಾವಿರ ಮತಗಳಿಂದ ಗೆದ್ದಿದ್ದ ಅಂಗಾರ ಗೆಲುವಿನ ಅಂತರ 2008ರಲ್ಲಿ 5 ಸಾವಿರಕ್ಕೆ ಕುಸಿದಿತ್ತು. ಅದರಲ್ಲೂ 2013ರಲ್ಲಿ ಕೇವಲ ಒಂದೂವರೆ ಸಾವಿರ ಮತಗಳಿಂದ ಅಂಗಾರ ಅವರು ಪ್ರಯಾಸದ ಜಯ ಸಾಧಿಸಿದ್ದರು.
ಕಳೆದ ಮೂರು ಚುನಾವಣೆಗಳಲ್ಲಿ ಇಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ನ ಡಾ.ಬಿ. ರಘು ನಿರಂತರವಾಗಿ ಮತಗಳಿಗೆ ಹೆಚ್ಚಿಸುತ್ತಾ ಬಂದಿದ್ದಾರೆ. ಅವರಿಗೆ ಈ ಬಾರಿಯೂ ಟಿಕೆಟ್ ಸಿಕ್ಕಿದ್ದು, ಅಂಗಾರ ತಮ್ಮ ಹಳೆಯ ಸ್ಪರ್ಧಿಯನ್ನು ಎದುರಿಸಲಿದ್ದಾರೆ.