ಕಾಂಗ್ರೆಸ್, ಬಿಜೆಪಿ ಇಬ್ರೂ ಹೈಕಮಾಂಡಿಗೆ ಕಪ್ಪ ನೀಡಿದ್ದಾರೆ -ಹೆಚ್ಡಿಕೆ
"ಎರಡೂ ರಾಷ್ಟ್ರೀಯ ಪಕ್ಷಗಳು ಚೆಕ್ ಮತ್ತು ಕ್ಯಾಶ್ ಮೂಲಕ ಕಪ್ಪ ನೀಡುತ್ತಿವೆ," ಎಂದು ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಎಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳೂರು, ಫೆಬ್ರವರಿ 13: "ಎರಡೂ ರಾಷ್ಟ್ರೀಯ ಪಕ್ಷಗಳು ಚೆಕ್ ಮತ್ತು ಕ್ಯಾಶ್ ಮೂಲಕ ಕಪ್ಪ ನೀಡುತ್ತಿವೆ," ಎಂದು ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಎಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
"ಬಿಜೆಪಿ ಕಳೆದ ಬಾರಿ ಬೋಗಸ್ ಯೋಜನೆ ಹೆಸರಲ್ಲಿ ಹೈಕಮಾಂಡಿಗೆ ಕಪ್ಪ ನೀಡಿತ್ತು. ಹೈಕಮಾಂಡಿಗೆ ಚೆಕ್ ಮೂಲಕ ಬಿಜೆಪಿ ಕಪ್ಪ ನೀಡುತ್ತಿತ್ತು. ಕಾಂಗ್ರೆಸ್ ಕ್ಯಾಶ್ ರೂಪದಲ್ಲೇ ಕಪ್ಪ ನೀಡಿದ್ದಾಗಿ ಯಡಿಯೂರಪ್ಪ ಹೇಳಿದ್ದಾರೆ. ಈಗ ಯಡಿಯೂರಪ್ಪ ಬಾಂಬ್ ಠುಸ್ ಆಗಿದ್ಯೋ ಗೊತ್ತಿಲ್ಲ, ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.[ಸಿದ್ದರಾಮಯ್ಯಗೆ 65 ಕೋಟಿ ಕಿಕ್ ಬ್ಯಾಕ್ : ಬಿಎಸ್ವೈ ಮತ್ತೊಂದು ಬಾಂಬ್]
ಭಾನುವಾರ (ಫೆ. 12)ರಂದು ಅವರು ಮಂಗಳೂರಿನ ಜೆ.ಡಿ.ಎಸ್ ಕಚೇರಿಯಲ್ಲಿ ಮಾತನಾಡಿದರು. "ಎತ್ತಿನಹೊಳೆ ಯೋಜನೆ ಬಗ್ಗೆ ಯೋಜನೆ ಸಿದ್ದ ಪಡಿಸಿದ್ದು ಆಗಿನ ಸದಾನಂದ ಗೌಡ ಸರಕಾರ. ಆದರೆ ಈಗ ದಕ್ಷಿಣ ಕನ್ನಡ ಜಿಲ್ಲಾ ಸಂಸದರು ಎತ್ತಿನಹೊಳೆ ಯೋಜನೆ ವಿರುದ್ಧ ಯಾಕೆ ಪ್ರತಿಭಟನೆ ಮಾಡುತ್ತಾರೋ ಗೊತ್ತಿಲ್ಲ," ಎಂದು ಹೇಳಿದ ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆ ನೆಪದಲ್ಲಿ ಗುತ್ತಿಗೆದಾರರಿಂದ ಹಣ ಪಡೆಯಲಾಗಿತ್ತು," ಎಂದು ಆರೋಪಿಸಿದರು.[ಹೈಕಮಾಂಡ್ ಕಪ್ಪ: ಬಿಜೆಪಿ ಮೇಲೆ 'ಸಿಡಿ' ಎಸೆದ ಕಾಂಗ್ರೆಸ್]
'ಎತ್ತಿನಹೊಳೆ ಯೋಜನೆ ಒಂದು ದುಡ್ಡು ಹೊಡೆಯುವ ಪ್ಲಾನ್. ಈ ಯೋಜನೆಯಿಂದ ನೀರು ಸಿಗಲ್ಲವೆಂದು ಎಲ್ಲರಿಗೂ ಗೊತ್ತು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಅವ್ಯವಹಾರ ಬಯಲು ಮಾಡುತ್ತೇನೆ. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ದಕ್ಷಿಣ ಕನ್ನಡ ಜನರಿಗೆ ಅನ್ಯಾಯ ಆಗಲು ಬಿಡಲ್ಲ," ಎಂದು ಕುಮಾರಸ್ವಾಮಿ ಹೇಳಿದ್ದಾರೆ.
'ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಜನ ಬೇಸತ್ತಿದ್ದಾರೆ. ಪ್ರಾದೇಶಿಕ ಪಕ್ಷ ಬೇಕೆನ್ನುವುದು ಜನರ ಅಭಿಪ್ರಾಯವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 113ಕ್ಕೂ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಮೈಸೂರಿನಲ್ಲಿ ನಡೆಸುವ ಉಪ ಚುನಾವಣೆಯಿಂದ ದೊಡ್ಡ ಮಟ್ಟದ ದುಂದುವೆಚ್ಚ ಆಗಲಿದೆ. ಬೈ ಇಲೆಕ್ಷನ್ ಫಲಿತಾಂಶ ಅಸೆಂಬ್ಲಿ ಚುನಾವಣೆಗೆ ದಿಕ್ಸೂಚಿಯಾಗಲ್ಲ' ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.