ಮಂಗಳೂರಲ್ಲಿ ಬೃಹತ್ ರಾಷ್ಟ್ರದ್ವಜ, ತುಂಬಿ ಬಂದ ದೇಶಾಭಿಮಾನ
ಮಂಗಳೂರು, ಆಗಸ್ಟ್. 17: ಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಮಂಗಳೂರಿನ 145 ವರ್ಷಗಳ ಇತಿಹಾಸವುಳ್ಳ ಪ್ರತಿಷ್ಠಿತ ಸಾರಸ್ವತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಅದ್ಭುತ ಶೈಲಿಯ ದೇಶಾಭಿಮಾನ ಪ್ರದರ್ಶಿತಗೊಂಡಿತ್ತು.
ಸಾರಸ್ವತ ವಿದ್ಯಾಸಂಸ್ಥೆ ಅಧೀನದಲ್ಲಿರುವ ಗಣಪತಿ ಆಂಗ್ಲಮಾಧ್ಯಮ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಅನಂದಾಶ್ರಮ ಶಾಲೆ ಹಾಗೂ ಪರಿಜ್ಞಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಪ್ರಯುಕ್ತ 305 ಮೀ ಉದ್ದದ ಬೃಹತ್ ರಾಷ್ಟ್ರದ್ವಜ ಗಣಪತಿ ಶಾಲೆಯಲ್ಲಿ ಶನಿವಾರ ಅನಾವರಣಗೊಂಡಿತು.[ಆ.20ರಿಂದ ಮಣಿಪಾಲ್-ಬೆಂಗಳೂರು ನಡುವೆ ಫ್ಲೈ ಬಸ್ ಸೇವೆ]
ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಅನಾವರಣಗೊಳಿಸಿ ಧ್ವಜವನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಗಣಪತಿ ಪ್ರೌಢ ಶಾಲೆ ಅಂಚಿನ ಮಹಾಲಕ್ಷ್ಮೀ ಗಣಪತಿ ದೇವಸ್ಥಾನದಿಂದ ರಾಷ್ಟ್ರಧ್ವಜ ಅನಾವರಣಗೊಳ್ಳುತ್ತಾ ಹಂಪನಕಟ್ಟಾ ವೃತ್ತದವರೆಗೆ ಮುಂದುವರಿಯಿತು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಮಕ್ಕಳಲ್ಲಿ ದೇಶಭಿಮಾನ ಮೂಡಿಸುವಲ್ಲಿ ಈ ವಿದ್ಯಾಸಂಸ್ಥೆ ಮಹತ್ತರ ಪಾತ್ರವಹಿಸುತ್ತಿದೆ. ಗುಣಮಟ್ಟದ ಶಿಕ್ಷಣ ಜೊತೆಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಿಮಾನ ಬೆಳೆಸುತ್ತಾ ಅವರ ಪ್ರತಿಭೆಗೂ ಮುಕ್ತ ಅವಕಾಶ ಕಲ್ಪಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಈ ಮಹತ್ತರ ಕಾರ್ಯವನ್ನು ಸ್ವಾತಂತ್ರ್ಯ ಹೋರಾಟಗಾರರು, ವೀರಯೋಧರು, ದೇಶಭಕ್ತ ಪ್ರಜೆಗಳಿಗೆ ಹಾಗೂ ರಕ್ಷಕರಿಗೆ ಸಮರ್ಪಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಲ್. ಬೊಂಡಾಲ್, ಕಾರ್ಯನಿರ್ವಾಹಣಾಧಿಕಾರಿ ಎ.ಎಸ್.ರಾಮಚಂದ್ರರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಸ್ವತ ಶಿಕ್ಷಣ ಸಂಸ್ಥೆಗಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಎಸ್.ಸಿ.ಸಿ. ಏರ್ ವಿಂಗ್, ನೇವಲ್ ವಿಂಗ್ ಮತ್ತು ಎಸ್.ಎಸ್.ಎಸ್ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತ್ರಿವರ್ಣ ದ್ವಜ ಹಿಡಿದು ಸಹಕರಿಸಿದರು.